ದುಬಾರಿ ಫಲದಾನ
ಬೆಂಗಳೂರು, ಮೇ 19– ‘ಮದುವೆ ಮಾಡಿ ನೋಡು’ ಗಾದೆ ಮಾಡಿದವರಿಗೆ ತೆಂಗಿನಕಾಯಿಯ ಭಯವಿರಲಿಲ್ಲ. ಆಗ ಬಹುಶಃ ಮೂರು ಕಾಸಿಗೊಂದು ಕಾಯಿ ಇದ್ದೀತು, ಮದುವೆ ವೆಚ್ಚದಲ್ಲಿ ಕಾಯಿ ಬಾಬತ್ತು ವೆಚ್ಚ ಗೌಣ.
ಈಗ ಮದುವೆ ಮಾಡುವವರಿಗೆ ತೆಂಗಿನಕಾಯಿಯೇ ದೊಡ್ಡ ಸವಾಲು. ಕೇವಲ ಎರಡು ವರ್ಷದ ಹಿಂದೆ ಸಗಟು ವ್ಯಾಪಾರಿಗಳಿಂದ ಕೊಂಡರೆ ಸಾವಿರಕ್ಕೆ 400 ರೂ.ಗಳಲ್ಲಿ ಮುಗಿಯುತ್ತಿದ್ದ ಬಾಬು ಈಗ 650 ರೂ. ತೆತ್ತರೂ ಒಳ್ಳೆಯ ಕಾಯಿ ಸಿಕ್ಕದಂತಾಗಿದೆ. ಇದಕ್ಕೆ ಕಾರಣ ಹಲವಾರು. ತೆಂಗಿನಕಾಯಿ ಉತ್ಪಾದನೆ ಜಾಸ್ತಿ ಇದ್ದರೂ ಬೇಡಿಕೆ ಹತ್ತಾರು ಪಟ್ಟು ಬೆಳೆದಿದೆ. ಮಾರಾಟ ತೆರಿಗೆ, ಸ್ಥಳೀಯ ಆಕ್ಟ್ರಾಯಿ ಸುಂಕ ಮತ್ತು ಸಾಗಾಣಿಕೆ ವೆಚ್ಚವು ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ.
ನಕ್ಸಲೀಯ ಹಾವಳಿ ನಿಗ್ರಹಕ್ಕೆ ಪರೀಕ್ಷಾ ಕೇಂದ್ರಗಳಲ್ಲಿ 144ನೇ ಸೆಕ್ಷನ್
ನವದೆಹಲಿ, ಮೇ 19– ಪರೀಕ್ಷಾ ಕೇಂದ್ರಗಳಲ್ಲಿ ಬೆಳೆಯುತ್ತಿರುವ ಅನಾಚಾರ ಹಾಗೂ ಉಸ್ತುವಾರಿ ಸಿಬ್ಬಂದಿ ಮೇಲೆ ಮುತ್ತಿಗೆಗಳನ್ನು ತಡೆಗಟ್ಟುವುದಕ್ಕಾಗಿ ಐಪಿಸಿ 144ನೇ ಸೆಕ್ಷನ್ ಪ್ರಯೋಗಿಸಲು ಸರ್ಕಾರ ಉದ್ದೇಶಿಸಿದೆ. ಈ ಪ್ರಕರಣಗಳಲ್ಲಿ ಕೆಲವರು ಉಸ್ತುವಾರಿ ಸಿಬ್ಬಂದಿ ಬಲಿಯಾಗಿದ್ದಾರೆ.
ವಿದ್ಯಾರ್ಥಿ ಅಶಾಂತಿ, ಅಶಿಸ್ತು ಮತ್ತು ಹಿಂಸಾಚಾರ ಕುರಿತು ಚರ್ಚಿಸಲು ಶಿಕ್ಷಣ ಸಚಿವ ಪ್ರೊ. ವಿ.ಕೆ.ಆರ್.ವಿ ರಾವ್ ಹಾಗೂ ಸಂಸತ್ತಿನಲ್ಲಿರುವ ವಿವಿಧ ಪಕ್ಷ ಮತ್ತು ತಂಡಗಳ ನಾಯಕರು ಇಂದು ಇಲ್ಲಿ ಸೇರಿದ್ದ ಸಭೆಯೊಂದರಲ್ಲಿ ಪ್ರಚುರಪಡಿಸಿದ ಶಿಕ್ಷಣ ಶಾಖೆ ಹೇಳಿಕೆಯೊಂದರಲ್ಲಿ ಈ ವಿಷಯ ವ್ಯಕ್ತಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.