ADVERTISEMENT

50 ವರ್ಷಗಳ ಹಿಂದೆ| ಶನಿವಾರ, 23–5–1970

​ಪ್ರಜಾವಾಣಿ ವಾರ್ತೆ
Published 22 ಮೇ 2020, 22:01 IST
Last Updated 22 ಮೇ 2020, 22:01 IST

ಉಕ್ಕಿನ ಕ್ಷಾಮದ ಕರಾಳ ಛಾಯೆ

ಬೆಂಗಳೂರು, ಮೇ 22– ಕೆಲವು ತಿಂಗಳುಗಳಿಂದ ಉತ್ಕಟವಾಗತೊಡಗಿರುವ ಉಕ್ಕಿನ ಕ್ಷಾಮ ಮತ್ತು ಅದರ ಬೆನ್ನುಹತ್ತಿ ಬಂದಿರುವ ಅಪಾರ ಬೆಲೆ ಏರಿಕೆಯು, ರಾಜ್ಯದ ಅಭಿವೃದ್ಧಿ ಕಾರ್ಯ ಮತ್ತು ನಿರ್ಮಾಣ ಚಟುವಟಿಕೆಗಳ ಮೇಲೆ ಕರಾಳ ಛಾಯೆ ಬೀರತೊಡಗಿದೆ.

ಉಕ್ಕು ಆಧಾರಿತ ಕೈಗಾರಿಕೆಗಳಲ್ಲಿ ಕಚ್ಚಾ ವಸ್ತುವಿನ ಕೊರತೆಯು ಉತ್ಪಾದನೆಯ ಗತಿಯನ್ನು ಕುಂಠಿತಗೊಳಿಸಿದೆ. ಸಹಸ್ರಾರು ಕಟ್ಟಡಗಳು, ಕಾರ್ಖಾನೆಗಳ ನಿರ್ಮಾಣಗಳು ಅರ್ಧದಲ್ಲಿ ನಿಲ್ಲುವ ಭಯ ತೋರಿದೆ. ಲೋಕೋಪಯೋಗಿ ಇಲಾಖೆಯ ಸುಮಾರು ಎಂಟು ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ದೊಡ್ಡ ಹಾಗೂ ಚಿಕ್ಕಪುಟ್ಟ 120 ಸೇತುವೆಗಳು ನಿರ್ಮಾಣ ಉಕ್ಕಿನ ಕೊರತೆಯಿಂದಾಗಿ ದಡ ಕಾಯುವ ಶಂಕೆ ಬಲವಾಗುತ್ತಿದೆ.

ADVERTISEMENT

ಭದ್ರಾವತಿ ಕಾರ್ಖಾನೆ ಸಾದಾ ಉಕ್ಕಿನ ಉತ್ಪನ್ನ ಕೈಬಿಟ್ಟಿದ್ದು ಮುಖ್ಯ ಕಾರಣ

ಬೆಂಗಳೂರು, ಮೇ 22– ಉಕ್ಕು ಕ್ಷಾಮಕ್ಕೆ, ಪ್ರತ್ಯೇಕವಾಗಿ ಮೈಸೂರಿನಲ್ಲಿ ಅದರ ಕೊರತೆ ಉಲ್ಬಣವಾಗಲು ಮುಖ್ಯ ಕಾರಣ, ಭದ್ರಾವತಿ ಉಕ್ಕಿನ ಕಾರ್ಖಾನೆಯು ಪೂರೈಕೆ ನಿಲ್ಲಿಸಿರುವುದು ಎಂಬ ದೂರು ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.

ಆಗುತ್ತಿರುವ ನಷ್ಟವನ್ನು ತಪ್ಪಿಸಲು ಸಾದಾ ಉಕ್ಕಿನ ಬದಲು ವಿಶೇಷ ಉಕ್ಕಿನ ಉತ್ಪಾದನೆಯಲ್ಲಿ ಕಾರ್ಖಾನೆಯು ತೊಡಗಿದೆ.

ಮನೆ ಕಟ್ಟಿ ನೋಡು

ಬೆಂಗಳೂರು, ಮೇ 22– ಉಕ್ಕು ಕ್ಷಾಮದ ಬಿಸಿಯೆಷ್ಟು? ದೊಡ್ಡ ಹಾಗೂ ಚಿಕ್ಕ ಕಟ್ಟಡಗಳನ್ನು ಕಂಟ್ರಾಕ್ಟ್‌ ತೆಗೆದುಕೊಳ್ಳುವ ನಗರದ ಖಾಸಗಿ ಸಂಸ್ಥೆಯವರೊಬ್ಬರು ಈ ರೀತಿ ಲೆಕ್ಕ ಹಾಕುತ್ತಾರೆ.

ಚಿಕ್ಕಪುಟ್ಟ ಮನೆಗಳನ್ನು ಕಟ್ಟುವವರ ಅವಸ್ಥೆಯೇನು? ಸುಮಾರು 20 ಸ್ಕ್ವೇರಿನ ಮನೆ ಕಟ್ಟಲು 60,000 ರೂ.ಗಳ ಅಂದಾಜು ತಯಾರಾಗಿರಬಹುದು ಅನ್ನಿ. ಇದಕ್ಕೆ ಬೇಕಾಗಬಹುದಾದ ಉಕ್ಕು ಸುಮಾರು 8 ಟನ್ನುಗಳು. ಹೆಚ್ಚಿದ ಬೆಲೆಯ ಪ್ರಕಾರ, ಅಂದಾಜಿನಲ್ಲಿರುವುದಕ್ಕಿಂತ ಸುಮಾರು 5,600 ರೂ.ಗಳನ್ನು ಮನೆಯೊಡೆಯ ಕಂಡುಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.