ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಮಂಗಳವಾರ, 13-10-1970

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 19:31 IST
Last Updated 12 ಅಕ್ಟೋಬರ್ 2020, 19:31 IST
   

ಕೇಂದ್ರ ಸಂಪುಟದ ಸಲಹೆ ಒಪ್ಪಿದರೆ ರಾಷ್ಟ್ರಪತಿ ದೋಷಾರೋಪಣೆಯೇ?

ಬೆಂಗಳೂರು, ಅ. 12– ಸುಮಾರು 22 ವರ್ಷಗಳ ಹಿಂದೆ, ಭಾರತದ ಸಂವಿಧಾನ ರೂಪಿಸುತ್ತಿದ್ದ ಸಭೆಯಲ್ಲಿ, ರಾಷ್ಟ್ರಪತಿಯ ಮೇಲೆ ದೋಷಾರೋಪಣೆ ಹೊರಿಸುವುದಕ್ಕೆ ಸಂಬಂಧಿಸಿದ ವಿಧಿಯ ಮೇಲೆ ಚರ್ಚೆ ನಡೆಯುತ್ತಿತ್ತು.

ಈಗ ಪಿ.ಎಸ್.ಪಿ.ಯಲ್ಲಿರುವ ಶ್ರೀ ಎಚ್‌.ವಿ.ಕಾಮತ್ ಅವರು, ರಾಷ್ಟ್ರಪತಿ ಅವರು ‘ಕೇಂದ್ರ ಮಂತ್ರಿಮಂಡಲದ ಸಲಹೆಯನ್ನು ಒಪ್ಪಲು ನಿರಾಕರಿಸಿದರೆ, ದೋಷಾರೋಪಣೆಗೆ ಬಾಧ್ಯರಾಗುವರೇ?’ ಎಂದು ಕೇಳಿದರು.

ADVERTISEMENT

ಸಂವಿಧಾನ ಶಿಲ್ಪಿ ದಿವಂಗತ ಡಾ. ಬಿ.ಆರ್.ಅಂಬೇಡ್ಕರ್ ಅವರು, ‘ಈ ಬಗ್ಗೆ ಸ್ವಲ್ಪವೂ ಸಂಶಯವಿಲ್ಲ’ ಎಂದು ಉತ್ತರ ನೀಡಿದರು.

ಆಗ ಸಂವಿಧಾನ ಸಭೆಯಲ್ಲಿ ನಡೆದ ಈ ಚರ್ಚೆಯನ್ನು ಇಂದು ವರದಿಗಾರರಲ್ಲಿ ಪ್ರಸ್ತಾಪಿಸಿದ ಪಿ.ಎಸ್.ಪಿ. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೇಮ್ ಭಾಸಿನ್ ಅವರು, ‘ಇದು ಸಂವಿಧಾನದ ಸೃಷ್ಟಿಕರ್ತರ ಉದ್ದೇಶವಾಗಿತ್ತು. ಈಗ ರಾಷ್ಟ್ರಪತಿಗಳು ಮಂತ್ರಿಮಂಡಲದ ಶಿಫಾರಸನ್ನು ಒಪ್ಪಿಕೊಂಡದ್ದಕ್ಕೆ ದೋಷಾರೋಪಣೆಗೆ ಬಾಧ್ಯರಾಗುವರೇ ಎಂಬುದನ್ನು ಪರಿಶೀಲಿಸಬೇಕಾಗಿದೆ’ ಎಂದು ನಗುತ್ತ ಹೇಳಿದರು.

ಸಾಧ್ಯವಾದಷ್ಟು ಬೇಗ ನಗರ ಆಸ್ತಿ ಮಿತಿ ನಿಗದಿ

ಪಟ್ನಾ, ಅ. 12– ನಗರಗಳಲ್ಲಿ ಆಸ್ತಿ ಮೇಲೆ ಮಿತಿ ಹೇರಲು ಸಾಧ್ಯವಾದಷ್ಟು ಶೀಘ್ರವಾಗಿ ಶಾಸನ ರಚಿಸುವಂತೆ ರಾಜ್ಯ ಸರ್ಕಾರಗಳಿಗೆ ಕರೆ ನೀಡಬೇಕೆಂದು ಎಐಸಿಸಿಗೆ ಶಿಫಾರಸು ಮಾಡಲು ಆಡಳಿತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ರಾತ್ರಿ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.