ADVERTISEMENT

50 ವರ್ಷಗಳ ಹಿಂದೆ: ಭಾನುವಾರ, 26–12–1970

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 1:10 IST
Last Updated 26 ಡಿಸೆಂಬರ್ 2020, 1:10 IST
   

ಮಹಾಜನ್‌ ವರದಿ ಜಾರಿಗೆ ತರುವ ವಿಧೇಯಕಕ್ಕೆ ಒತ್ತಾಯ
ಬೆಂಗಳೂರು, ಡಿ. 25– ಮಹಾಜನ್‌ ವರದಿಯಲ್ಲಿ ಎಲ್ಲ ಶಿಫಾರಸುಗಳನ್ನು ಜಾರಿಗೆ ತರುವ ವಿಧೇಯಕವೊಂದನ್ನು ‘ಈಗಲಾದರೂ’ ಸಂಸತ್ತಿನ ಮುಂದೆ ಮಂಡಿಸಿ, ಮಂಜೂರು ಮಾಡಿಸಬೇಕು ಎಂದು ಮೈಸೂರು ವಿಧಾನಸಭೆಯು ಇಂದು ರಾತ್ರಿ ಕೇಂದ್ರವನ್ನು ಒತ್ತಾಯ ಮಾಡಿತು.

ಚಳವಳಿ ನಡೆಸುತ್ತಿರುವ ಜನರು, ಅದರಲ್ಲೂ ಯುವಜನರು, ಚಳವಳಿ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಕರೆ ನೀಡಿರುವ ನಿಣರ್ಯವು, ಈ ಕ್ರಮಗಳು ಸೊತ್ತು ಮತ್ತು ಪ್ರಾಣ ಹಾನಿಗೆ ಮಾತ್ರ ಕಾರಣವಲ್ಲ, ನಾವು ಸಾಧಿಸಬೇಕೆಂದಿರುವ ಗುರಿಗೂ ಬಾಧಕ ಎಂದು ಹೇಳಿದೆ.

ಸರ್ವಭಾಷಾಮಯೀ ಸರಸ್ವತೀ ದರ್ಶನ
ಬೆಂಗಳೂರು, ಡಿ. 25– ಕನ್ನಡ ಸಾಹಿತ್ಯ ಪರಿಷತ್ತಿನ ಸ್ವರ್ಣ ಮಹೋತ್ಸವ ಏರ್ಪಡಿಸಿದ್ದ ಬೆಳ್ಳಾವೆ ವೆಂಕಟನಾರಣಪ್ಪ ಮಂಟಪದಲ್ಲಿ ಒಂದು ಅಪೂರ್ವ ಸನ್ನಿವೇಶ. ಪ್ರಥಮ ಬಾರಿಗೆ ಎಲ್ಲ ಸೋದರ ಭಾಷೆಗಳ ವಿದ್ವಾಂಸರ ಮಿಲನ. ‘ನಮ್ಮ ಭಾಷೆಯ ಒಲವು–ನಿಲುವು’ ‍ಪ್ರತೀ ಭಾರತೀಯ ಭಾಷೆಯ ಪ್ರಗತಿ ಎತ್ತ ಸಾಗಿದೆ ಎಂದು ಪರಿಚಯ ಮಾಡಿಕೊಡುವ ಸುಂದರ ಪ್ರಸಂಗ ‘ಅಂತರ ಭಾರತಿ’.

ADVERTISEMENT

ರಸಋಷಿ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಮರಾಠಿ, ಅಸ್ಸಾಮಿ ಮತ್ತು ಪಂಜಾಬಿ ಸಾಹಿತ್ಯ ವಿಮರ್ಶಕರು ಅನಿವಾರ್ಯವಾಗಿ ಭಾಗವಹಿಸಲು ಸಾಧ್ಯವಾಗದಿದ್ದರೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇತರ ಭಾಷಾ ಸಾಹಿತಿಗಳ ಮೇಳವಾಗಿತ್ತು. ಕನ್ನಡಿಗರ ಸೌಜನ್ಯ, ಪರಿಷತ್ತಿನ ದೂರದೃಷ್ಟಿ ಮೆಚ್ಚುಗೆ ಪಡೆದವು. ಗೋಷ್ಠಿಯ ನಿರ್ದೇಶಕ ಡಾ. ರಂ.ಶ್ರೀ.ಮುಗಳಿ ಅವರು ನುಡಿದಂತೆ, ಭಿನ್ನತೆಯಲ್ಲಿ ಏಕತೆ ಇರುವ ಭಾರತಾಂಬೆಯ ವೈಶಿಷ್ಟ್ಯ ಬೆಳಗುವ ಸಂಕೇತ– ಆಯಾ ಭಾಷಾ ಕವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.