ನಾಲ್ಕನೆ ಯೋಜನೆ ಕುರಿತು ‘ಇನ್ನಷ್ಟು ವಿಮರ್ಶೆ’
ನವದೆಹಲಿ, ಏ. 20– ಐದನೇ ಹಣಕಾಸು ಆಯೋಗದ ತೀರ್ಪು ಬಂದ ನಂತರ ನಾಲ್ಕನೇ ಪಂಚವಾರ್ಷಿಕ ಯೋಜನೆ ಕರಡನ್ನು ‘ಇನ್ನಷ್ಟು ವಿಮರ್ಶೆ ಹಾಗೂ ಪರಿಶೀಲನೆ’ ಮಾಡಬೇಕೆಂದು ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಇಂದು ನಿರ್ಧರಿಸಿತು.
ಏತನ್ಮಧ್ಯೆ, ಯೋಜನೆ ಕರಡು ನಾಳೆ (ಸೋಮವಾರ) ಸಂಸತ್ತಿನಲ್ಲಿ ಚರ್ಚೆಗಾಗಿ ಮಂಡಿಸಲಾಗುವುದು.
ಎರಡು ದಿನಗಳ ಸಭೆಯಲ್ಲಿ ನಿರ್ಧರಿಸಲಾದ ಪುನರ್ವಿಮರ್ಶೆಯು ಹಣಕಾಸು ಆಯೋಗದ ಶಿಫಾರಸುಗಳ ದೃಷ್ಟಿಯಿಂದ ಮಾತ್ರವೇ ಆಗಿರದೆ, ಕೇಂದ್ರದಿಂದ ಹೆಚ್ಚು ಹಣಕ್ಕಾಗಿ ಬೇಡಿಕೆಯೂ ಸೇರಿ ರಾಜ್ಯ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ ವಿವಿಧ ಯೋಜನೆಗಳನ್ನು ಒಳಗೊಂಡಿರುವುದು.
24,398 ಕೋಟಿ ರೂ. ವೆಚ್ಚದ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಕರಡಿಗೆ ಇಂದು ಅಭಿವೃದ್ಧಿ ಮಂಡಲಿಯಲ್ಲಿ ಸಾಮಾನ್ಯ ಒಪ್ಪಿಗೆ ದೊರೆಯಿತು.
ಹಳೇ ಮೈಸೂರಿಗೆ ಅನ್ಯಾಯದ ದೂರು: ಸಮಿತಿ ನೇಮಕ ಶ್ರೇಷ್ಠ ಮಾರ್ಗ ಎಂದು ಕೆಂಗಲ್
ಬೆಂಗಳೂರು, ಏ. 20–ಆಡಳಿತ ಮತ್ತು ರಾಜಕೀಯ ರಂಗದಲ್ಲಿ ತಾರತಮ್ಯದಿಂದ ಹಳೆಯ ಮೈಸೂರಿಗೆ ಅನ್ಯಾಯವಾಗಿದೆಯೆ ಎಂಬುದನ್ನು ಪರಿಶೀಲಿಸಲು ನಿಷ್ಪಕ್ಷಪಾತವಾದ ವಿಷಯ ಸಂಗ್ರಹ ಸಮಿತಿಯೊಂದನ್ನು ನೇಮಿಸಿ ಅನ್ಯಾಯವಾಗಿದ್ದಲ್ಲಿ ಅದನ್ನು ಸರಿಪಡಿಸಬೇಕೆಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶ್ರೀ ಕೆ. ಹನುಮಂತಯ್ಯನವರು ಇಂದು ಇಲ್ಲಿ ನುಡಿದರು.
ಅಖಿಲ ಭಾರತ ಆಧಾರ ಮೇಲೆ ಕಾಲೇಜ್ ಸೀಟ್ ಯು.ಜಿ.ಸಿ. ಶಿಫಾರಸು
ನವದೆಹಲಿ, ಏ. 20– ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಶೇ 100 ರಷ್ಟು ನೆರವು ಪಡೆಯುತ್ತಿರುವ ವಿಶ್ವವಿದ್ಯಾಲಯಗಳು ಅಖಿಲ ಭಾರತ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತೆ ವಿಧಿಸಲು ಆಯೋಗ ಉದ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.