ಕೆಂಗಲ್ ಆಯೋಗದ ಶಿಫಾರಸು: ಸರ್ಕಾರಿ ನೌಕರರಿಗೆ ಮುಷ್ಕರ ಹೂಡುವ ಹಕ್ಕು ಕೂಡದು
ನವದೆಹಲಿ, ಏ. 18– ಮುಷ್ಕರ ಹೂಡುವ ಹಕ್ಕು ಸರ್ಕಾರಿ ನೌಕರರಿಗೆ ಇರಬಾರದು ಎಂದು ಆಡಳಿತ ಸುಧಾರಣಾ ಆಯೋಗ ಇಂದು ಶಿಫಾರಸು ಮಾಡಿದೆ.
‘ಯಾವುದೇ ಸಂದರ್ಭದಲ್ಲಿಯೂ ಮುಷ್ಕರ ಹೂಡುವುದಿಲ್ಲ’ ಎಂಬ ಪ್ರತಿಜ್ಞಾ ಪತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹೊಸದಾಗಿ ನೌಕರಿಗೆ ಸೇರುವ ಪ್ರತಿಯೊಬ್ಬರೂ ಸಹಿ ಮಾಡಬೇಕು ಎಂದೂ ಅದು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಆಯೋಗದ ಅಧ್ಯಕ್ಷ ಶ್ರೀ ಕೆ. ಹನುಮಂತಯ್ಯ ಅವರು ಈ ವರದಿಯನ್ನು ಇಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರಿಗೆ ಸಲ್ಲಿಸಿದರು.
ಅಗತ್ಯ ಸೇವಾ ವ್ಯವಸ್ಥೆಗಳ ಪಾಲನಾ ಶಾಸನದಲ್ಲಿ ಸೂಚಿಸಲಾಗಿರುವ ತತ್ವಕ್ಕೆ ಬೆಂಬಲ ವ್ಯಕ್ತಪಡಿಸಿರುವ ಆಯೋಗವು ರಾಜ್ಯ ಸರ್ಕಾರಗಳು ಸಹ ಅದನ್ನು ಅನುಸರಿಸಬೇಕೆಂದು ಸೂಚಿಸಿದೆ.
ಅಭಿವೃದ್ಧಿ ಮಂಡಳಿ ಘರ್ಷಣೆಗೆ ನಾಂದಿ: ನಾಲ್ಕನೇ ಯೋಜನೆ ಕರಡು ಒಪ್ಪಲು ಇ.ಎಂ.ಎಸ್. ನಕಾರ
ನವದೆಹಲಿ, ಏ. 18– ಇಂದು ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯ ಅನೌಪಚಾರಿಕ ಸಭೆಯಲ್ಲಿ ಕೇರಳದ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದಿರಿಪಾಡ್ ಅವರು ನಾಲ್ಕನೇ ಯೋಜನೆಯ ಕರಡನ್ನು ತಿರಸ್ಕರಿಸಿದರು.
ಕರಡು ಯೋಜನೆಯ ಬಗ್ಗೆ ಬರಬಹುದಾದ ಯಾವುದೇ ಒಟ್ಟು ಅಭಿಪ್ರಾಯಕ್ಕೆ ತಮ್ಮ ಸಮ್ಮತಿ ಇಲ್ಲವೆಂದೂ, ಅಂತಹ ಒಟ್ಟು ಅಭಿಪ್ರಾಯ ಕೊಡುವವರಲ್ಲಿ ತಾವು ಸೇರಿರುವುದಿಲ್ಲವೆಂದೂ ಶ್ರೀ ನಂಬೂದಿರಿಪಾಡ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.