ಭಾರಿ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಇಂದಿರಾ ಒತ್ತಾಯ
ಬೆಂಗಳೂರು, ಜುಲೈ 9– ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಅನಿರೀಕ್ಷಿತ ಪತ್ರವೊಂದನ್ನು ಬರೆದು, ದೇಶದಲ್ಲಿನ ಭಾರಿ ಬ್ಯಾಂಕಿಂಗ್ ಸಂಸ್ಥೆಗಳು ಮತ್ತು ಆಮದು ವಾಣಿಜ್ಯವನ್ನು ಸರ್ಕಾರವೇ ವಹಿಸಿಕೊಳ್ಳಬೇಕೆಂದು ಒತ್ತಾಯಪಡಿಸಿದ್ದಾರೆ.
ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ನಿರ್ಣಯವನ್ನು ಅಂತಿಮವಾಗಿ ಸಿದ್ಧಗೊಳಿಸಲು ಸಂಜೆ ‘ಕುಮಾರ ಕೃಪಾ’ದಲ್ಲಿ ಸಭೆ ಸೇರಿದ್ದ ಕಾರ್ಯಕಾರಿ ಸಮಿತಿ ಸಭೆಗೆ ಪ್ರಧಾನಿಯವರ ಹಠಾತ್ ಪತ್ರದಿಂದ ಅತೀವ ಆಶ್ಚರ್ಯವುಂಟಾಯಿತು.
ಸರ್ವಶ್ರೀ ಸಿ. ಸುಬ್ರಹ್ಮಣಂ ಹಾಗೂ ಸಾದಿಕ್ ಅಲಿ ಆವರು ಆರ್ಥಿಕ ಪರಿಸ್ಥಿತಿಯ ಬಗ್ಗೆ ಒಟ್ಟಾಗಿ ಸಿದ್ಧಪಡಿಸಿದ್ದ ಕರಡು ನಿರ್ಣಯದಲ್ಲಿ ಬ್ಯಾಂಕ್ ರಾಷ್ಟ್ರೀಕರಣದ ಪ್ರಸ್ತಾಪವಿಲ್ಲ.
‘ಇಂಡಿಕೇಟ್’
ಬೆಂಗಳೂರು, ಜುಲೈ 9– ‘ಸಿಂಡಿಕೇಟ್’ ಎಂಬುದು ಕಾಂಗ್ರೆಸ್ ಹೈಕಮಾಂಡಿನ ಕೆಲವು ಪ್ರಮುಖರ ಪ್ರಭಾವ ವಲಯದಲ್ಲಿರುವ ಗುಂಪಾದರೆ, ‘ಇಂಡಿಕೇಟ್’ ಎಂಬುದು ಶ್ರೀಮತಿ ಇಂದಿರಾ ಗಾಂಧಿಯವರ ಸುತ್ತಲಿರುವ ತಂಡ.
ಹಾಗೆಂದು, ಈ ಮಾತುಗಳಲ್ಲಿ ಶ್ರೀ ಎಸ್.ಕೆ. ಪಾಟೀಲರು ವರ್ಣಿಸದೇ ಹೋದರೂ, ಪರೋಕ್ಷವಾಗಿ ಅವುಗಳ ಅಸ್ತಿತ್ವವನ್ನು ಒಪ್ಪಿಕೊಂಡ ಶ್ರೀಯುತರು ‘ಇವುಗಳುಪತ್ರಿಕೆಗಳೇ ಮಾಡಿದ ನಾಮಕರಣ. ಇದೀಗ ಅವುಗಳು ಎಷ್ಟರ ಮಟ್ಟಿಗೆ ಜನಪ್ರಿಯವಾಗಿವೆಯೆಂದರೆ, ಆ ಹೆಸರನ್ನಿಟ್ಟು ಕರೆದರೆ ಮಾತ್ರ ಜನಗಳಿಗೆ ಅರ್ಥವಾಗುವಂಥ ಪರಿಸ್ಥಿತಿ ಬಂದಿದೆ’ ಎಂದರು.
ಸಿಂಹ– ಭಾರತದ ರಾಷ್ಟ್ರೀಯ ಮೃಗ
ನವದೆಹಲಿ, ಜುಲೈ 9– ವನರಾಜ ಸಿಂಹ ಈಗ ಭಾರತದ ರಾಷ್ಟ್ರೀಯ ಮೃಗದ ಪಟ್ಟವನ್ನು ಅಲಂಕರಿಸಿದೆ. ಸಿಂಹವನ್ನು ರಾಷ್ಟ್ರೀಯ ವನ್ಯಮೃಗ ಮಂಡಳಿಯು ಇಂದು ರಾಷ್ಟ್ರ ಮೃಗವನ್ನಾಗಿ ಅಂಗೀಕರಿಸಿತು. ಮಂಡಳಿಯ ಅಧ್ಯಕ್ಷತೆಯನ್ನು ಪ್ರವಾಸೋದ್ಯಮ ಸಚಿವ ಕರಣ್ಸಿಂಗ್ ವಹಿಸಿದ್ದರು.
ರಾಷ್ಟ್ರದಲ್ಲಿ ಸಿಂಹ ಸಂತತಿ ನಶಿಸಿ ಹೋಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಪಾಡಲು ಇದರಿಂದ ಅನುಕೂಲವಾಗುವುದು.
ಪುರಾತನ ಗ್ರಂಥಗಳಲ್ಲಿ ಪ್ರಸ್ತಾಪಗೊಂಡಿರುವ ಸಿಂಹವು ರಾಷ್ಟ್ರದ ಲಾಂಛನವೂ ಹೌದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.