ಗುರುಪಾದಸ್ವಾಮಿ ಹಾಗೂ ಮೂರು ಮಂದಿ ಕಿರಿಯ ಸಚಿವರ ಪದಚ್ಯುತಿ
ನವದೆಹಲಿ, ಅ. 15– ‘ಸುಬದ್ಧ ಹಾಗೂ ಉದ್ದೇಶಸಾಧಕ’ ಸರ್ಕಾರ ರಚನೆಗಾಗಿ ಕೇಂದ್ರ ಸಮುದಾಯ ಅಭಿವೃದ್ಧಿ ಮತ್ತು ಸಹಕಾರ ಖಾತೆ ಸ್ಟೇಟ್ ಸಚಿವ ಶ್ರೀ ಎಂ.ಎಸ್. ಗುರುಪಾದಸ್ವಾಮಿ ಅವರೂ ಸೇರಿ ಇಬ್ಬರು ಸ್ಟೇಟ್ ಸಚಿವರು ಹಾಗೂ ಇಬ್ಬರು ಉಪಸಚಿವರನ್ನು ತಮ್ಮ ಸಚಿವ ಮಂಡಲಿಯಿಂದ ತೆಗೆದುಹಾಕಲು ಪ್ರಧಾನಿ ಇಂದಿರಾ ಗಾಂಧಿ ಅವರು ನಿರ್ಧರಿಸಿದ್ದಾರೆಂದು ಗೊತ್ತಾಗಿದೆ.
ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಲಾಗುವ ಸಚಿವರುಗಳಿವರು:
1. ಶ್ರೀ ಎಂ.ಎಸ್. ಗುರುಪಾದಸ್ವಾಮಿ (ಕೇಂದ್ರ ಸಮುದಾಯ ಅಭಿವೃದ್ಧಿ ಮತ್ತು ಸಹಕಾರ ಖಾತೆ ಸ್ಟೇಟ್ ಸಚಿವರು)
2. ಶ್ರೀ ಪರಿಮಳ ಘೋಷ್ (ರೈಲ್ವೆ ಖಾತೆಯ ಸ್ಟೇಟ್ ಸಚಿವರು)
3. ಶ್ರೀ ಜೆ.ಬಿ. ಮುತ್ಯಾಲರಾವ್ (ಸಮಾಜ ಕಲ್ಯಾಣ ಖಾತೆ ಉಪಸಚಿವರು)
4. ಶ್ರೀ ಜಗನ್ನಾಥರಾವ್ ಪಹಾಡಿಯ (ಕೇಂದ್ರ ಹಣಕಾಸು ಖಾತೆ ಉಪಸಚಿವರು)
ಲೆವಿ ಭತ್ತಕ್ಕೆ ಕ್ವಿಂಟಲ್ಗೆ ಎರಡು ರೂ. ಹೆಚ್ಚು ಬೆಲೆ
ಬೆಂಗಳೂರು, ಅ. 15– ಲೆವಿ ಮೂಲಕ ಸಂಗ್ರಹಿಸಲಾಗುವ ಭತ್ತಕ್ಕೆ ಪ್ರತಿ ಕ್ವಿಂಟಲ್ಗೂ ಈ ವರ್ಷ ಎರಡು ರೂಪಾಯಿ ಹೆಚ್ಚಿಗೆ ಕೊಡಲು ಸರ್ಕಾರ ನಿರ್ಧರಿಸಿದೆ.
ಕಳೆದ ವರ್ಷ ಭತ್ತಕ್ಕೆ 48 ರೂ. ಇದ್ದಿತು. ಈ ವರ್ಷ ಅದನ್ನು 50 ರೂ.ಗೆ ಹೆಚ್ಚಿಸಲಾಗಿದೆ.
ಸ್ವತಂತ್ರ ಕಾಶ್ಮೀರ ರಚನೆ ಷೇಖ್ ಬಯಕೆ ಅಲ್ಲ
ನವದೆಹಲಿ, ಅ. 15– ಷೇಖ್ ಅಬ್ದುಲ್ಲಾ ಅವರು ಸ್ವತಂತ್ರ ಕಾಶ್ಮೀರ ಪ್ರಶ್ನೆಯನ್ನು ಇಂದು ಸೂಚ್ಯವಾಗಿ ತಳ್ಳಿಹಾಕಿದರು. ಈ ಸಮಸ್ಯೆಗೆ ಸ್ವತಂತ್ರ ಕಾಶ್ಮೀರ ರಚನೆ ಪರಿಹಾರವೆಂಬುದು ‘ಗಾಬರಿಯನ್ನುಂಟು ಮಾಡುವ ಸೂಚನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.