ರಾಜಿ ಯತ್ನಕ್ಕೆ ಎಸ್ಸೆನ್ ಆಶೀರ್ವಾದ
ನವದೆಹಲಿ, ನ. 9– ಕಾಂಗ್ರೆಸ್ ಪಕ್ಷದಲ್ಲಿನ ಸಾಂಸ್ಥಿಕ ವಿಭಾಗ ಹಾಗೂ ಶಾಸಕ ವಿಭಾಗದ ನಡುವಣ ಬಿಕ್ಕಟ್ಟನ್ನು ಸರಿಪಡಿಸುವುದಕ್ಕಾಗಿ ಇತರ ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಕಲೆಹಾಕುವ ಮೈಸೂರು ರಾಜ್ಯದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರ ಹೊಸ ಪ್ರಯತ್ನ ಯಶಸ್ವಿಯಾಗಲೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಈ ರಾತ್ರಿ ಇಲ್ಲಿ ಶುಭ ಹಾರೈಸಿದರು.
ವೀರೇಂದ್ರ ಪಾಟೀಲ್ ಅವರ ಈ ಪ್ರಯತ್ನ ಕುರಿತು ವರದಿಗಾರರು ಕೇಳಿದಾಗ ಶ್ರೀ ನಿಜಲಿಂಗಪ್ಪ ಅವರು ಈ ವಿಷಯ ತಮಗೇನೂ ಮೊದಲು ಗೊತ್ತಿರಲಿಲ್ಲವೆಂದರು.
ಹೊಸಯತ್ನಕ್ಕೆ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ವೀರೇಂದ್ರರ ಸಲಹೆ
ಬೆಂಗಳೂರು, ನ. 9– ‘ಏನೇ ಆಗಲಿ ಕಾಂಗ್ರೆಸ್ ಒಡೆದು ಹೋಗುವುದನ್ನು ತಪ್ಪಿಸಬೇಕು’ ಎಂಬ ನಿರ್ದಿಷ್ಟ ನಿಲುವನ್ನು ಕಳೆದು ಒಡಂಬಡಿಕೆಗೆ ಹೊಸ ಪ್ರಯತ್ನ ಮಾಡಬೇಕೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರಪಾಟೀಲ್ ಅವರು ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ‘ಕೊನೆಯ ಘಟ್ಟದ’ ಮನವಿಯನ್ನು ಮಾಡಿದ್ದಾರೆ.
ಕಾಂಗ್ರೆಸ್ ಮುಖ್ಯಮಂತ್ರಿಗಳು ಸ್ವತಂತ್ರವಾಗಿ ಪ್ರಯತ್ನಿಸಿ ಒಡಂಬಡಿಕೆಗೆ ಸೂತ್ರವೊಂದನ್ನು ರೂಪಿಸಿ ದಲ್ಲಿ, ಅದು ಎರಡೂ ಗುಂಪುಗಳ ಮೇಲೆ ಪ್ರಭಾವ ಬೀರುವುದೆಂಬುದು ಮುಖ್ಯಮಂತ್ರಿಗಳ ವಿಶ್ವಾಸ.
ಆಂಧ್ರದಲ್ಲಿ ಬಿರುಗಾಳಿಗೆ ಇಪ್ಪತ್ಮೂರು ಬಲಿ
ಹೈದರಾಬಾದ್, ನ. 9– ಶುಕ್ರವಾರ ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳನ್ನು ತಲ್ಲಣಗೊಳಿಸಿದ ಚಂಡಮಾರುತ ಇಪ್ಪತ್ಮೂರು ಜನರನ್ನು ಬಲಿ ತೆಗೆದುಕೊಂಡಿತು. ಪೂರ್ವಗೋದಾವರಿ ಜಿಲ್ಲೆಯಲ್ಲಿ ಮೂವತ್ತು ಜನರಿಗೆ ಗಾಯಗಳಾಗಿವೆಯೆಂದು ಇತ್ತೀಚಿನ ವರದಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.