ಇಂದಿರಾ ಕೊಲೆಗೆ ಸಂಚು? ಲೋಕಸಭೆಯಲ್ಲಿ ಚಕಮಕಿ
ನವದೆಹಲಿ, ಡಿ. 20– ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಕೊಲೆ ಮಾಡಲು ಒಳಸಂಚು ನಡೆಯುತ್ತಿದೆಯೆಂಬ ಪತ್ರಿಕಾ ವರದಿ ಬಗ್ಗೆ ಇಂದು ಲೋಕಸಭೆಯಲ್ಲಿ ಗಲಭೆ, ಗೊಂದಲವುಂಟಾಯಿತು.
ಶ್ರೀಮತಿ ಗಾಂಧಿಯವರನ್ನು ಕೊಲೆ ಮಾಡಿಸಲು ಪಿತೂರಿ ನಡೆಯುತ್ತಿದೆಯೆಂಬ ವರದಿಯನ್ನು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಅಧಿಕಾರಾರೂಢ ಕಾಂಗ್ರೆಸ್ಸಿನ ಅಮರಸಿಂಗ್ ಸೈಗಾಲ್ ಅವರು ಈ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಕೇಳಿದರು. ಇದು ತುಂಬ ಅಪಾಯಕಾರಿ ಮತ್ತು ಕಳವಳವನ್ನುಂಟು ಮಾಡುವ ವರದಿ ಎಂದು ನುಡಿದ ಸೈಗಾಲ್ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ಪಿತೂರಿಯಲ್ಲಿ ಸೇರಿಕೊಂಡಿದೆಯೆಂದು ಆಪಾದಿಸಿದರು.
ತನಗಿಂತ ಹಿರಿಯರಿಲ್ಲವೆಂಬ ಇಂದಿರಾ ಮನೋಭಾವದ ಖಂಡನೆ
ಕಾಂಗ್ರೆಸ್ನಗರ, ಡಿ. 20– ‘ತನಗಿಂತ ಹಿರಿಯರಿಲ್ಲ’ ಎಂಬ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಭಾವನೆಯನ್ನು ಶ್ರೀ ನಿಜಲಿಂಗಪ್ಪನವರು ಖಂಡಿಸುತ್ತ, ತಮ್ಮ ಗುಂಪಿನ ಕಾಂಗ್ರೆಸ್ಸಿಗರ ಪೂರ್ಣಾಧಿವೇಶನವನ್ನು ಇಂದು ಇಲ್ಲಿ ಉದ್ಘಾಟಿಸಿದರು.
‘ಇಂದಿರಾ ಗಾಂಧಿಯವರು ಕಾಂಗ್ರೆಸ್ ನಾಯಕತ್ವವನ್ನು ಯಜಮಾನರ ಗುಂಪೆಂದು ಖಂಡಿಸಿದರು. ಆದರೆ ನಾವು ಕಾಂಗ್ರೆಸ್ಸಿನ ಸೇವಕರು ಮಾತ್ರ. ಪ್ರಧಾನಿಯವರು ಹಿರಿಯ ಯಜಮಾನರಾಗಬೇಕೆಂಬ ಅಪೇಕ್ಷೆಯಿಂದ ನಮ್ಮನ್ನು ಈ ರೀತಿ ಆರೋಪಿಸಿದರು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.