ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಬುಧವಾರ, 23 ಆಗಸ್ಟ್, 1972

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 19:44 IST
Last Updated 22 ಆಗಸ್ಟ್ 2022, 19:44 IST
   

ಇಂದು ದೆಹಲಿಗೆ ಅರಸು: ರಾಜ್ಯದ ನಾನಾ ಸಮಸ್ಯೆಗಳ ಬಗೆಗೆ ನಾಯಕರ ಜತೆ ಚರ್ಚೆ

ಬೆಂಗಳೂರು, ಆಗಸ್ಟ್‌ 22– ರಾಜ್ಯಕ್ಕೆ ಸಂಬಂಧಿಸಿದ ನಾನಾ ವಿಷಯಗಳ ಬಗ್ಗೆ ಕೇಂದ್ರದ ನಾಯಕರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು ನಾಳೆ ಸಂಜೆ ದೆಹಲಿಗೆ ತೆರಳುವರು.

ಶ್ರೀ ಅರಸು ಅವರು ತಮ್ಮ ಈ ದೆಹಲಿ ಭೇಟಿಯ ಅವಕಾಶವನ್ನು ಉಪಯೋಗಿಸಿಕೊಂಡು ಕೇಂದ್ರ ನಾಯಕರಿಗೆ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿ, ನಗರಕ್ಕೆ ಶ್ರೀ ಯಶಪಾಲ್‌ ಕಪೂರ್ ಅವರ ಭೇಟಿ ನಂತರದ ಅವರ ಪತ್ರಿಕಾಗೋಷ್ಠಿ ಹಾಗೂ ಅನಂತರದ ಶ್ರೀ.ಕೆ.ಹನುಮಂತಯ್ಯ ಅವರ ಪತ್ರಿಕಾಗೋಷ್ಠಿ ಎಬ್ಬಿಸಿರುವ ವಾದ ವಿವಾದಗಳನ್ನು ಸ್ಪಷ್ಟಪಡಿಸುವರು ಎಂದು ನಿರೀಕ್ಷಿಸಲಾಗಿದೆ.

ADVERTISEMENT

ವಿದ್ಯುತ್‌ ಕ್ಷಾಮ: ರಾವ್ ಎಚ್ಚರಿಕೆ

ನವದೆಹಲಿ, ಆಗಸ್ಟ್‌ 22– ಐದನೇ ಯೋಜನೆ ಅವಧಿಯಲ್ಲಿ ಇನ್ನೂ 200 ಲಕ್ಷ ಕಿಲೋವಾಟ್ ಹೆಚ್ಚು ವಿದ್ಯುತನ್ನು ಉತ್ಪಾದಿಸದಿದ್ದರೆ ರಾಷ್ಟ್ರ ತೀವ್ರತರ ವಿದ್ಯುತ್‌ ಕೊರತೆಯನ್ನು ಎದುರಿಸಬೇಕಾಗುವುದು ಎಂದು ಕೇಂದ್ರ ನೀರಾವರಿ ಮತ್ತು ವಿದ್ಯುತ್‌ ಸಚಿವ ಡಾ।।ಕೆ.ಎಲ್‌.ರಾವ್‌ರವರು ಇಂದು ಲೋಕಸಭೆಯಲ್ಲಿ ಎಚ್ಚರಿಕೆ ನೀಡಿದರು.

ದೇಶದ ವಿವಿಧ ಭಾಗಗಳಲ್ಲಿ ತಲೆದೋರಿರುವ ವಿದ್ಯುತ್‌ ಅಭಾವ ಪರಿಸ್ಥಿತಿ ಕುರಿತ ನಾಲ್ಕು ಗಂಟೆ ಕಾಲದ ವಿಶೇಷ ಚರ್ಚೆಯನ್ನು ಮುಕ್ತಾಯಗೊಳಿಸಿ ಮಾತನಾಡಿದ ಅವರು, ಐದನೇ ಯೋಜನೆಯಲ್ಲಿ ಇಪತ್ತು ದಶ ಕಿಲೋವಾಟ್ ವಿದ್ಯುತ್‌ ಉತ್ಪಾದನೆ ಕಾರ್ಯ ಕೈಗೊಳ್ಳಬೇಕೆಂಬ ಸಲಹೆಯನ್ನು ಯೋಜನಾ ಆಯೋಗ ಒಪ್ಪಿಕೊಂಡಿದೆಯೆಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.