ADVERTISEMENT

50 ವರ್ಷಗಳ ಹಿಂದೆ: ರಾಜಕೀಯಕ್ಕಾಗಿ ಚಳವಳಿ ಬಳಕೆ

ಮಂಗಳವಾರ 23, ಏಪ್ರಿಲ್‌ 1974

ಪ್ರಜಾವಾಣಿ ವಿಶೇಷ
Published 22 ಏಪ್ರಿಲ್ 2024, 19:37 IST
Last Updated 22 ಏಪ್ರಿಲ್ 2024, 19:37 IST
   

ಶಿಕ್ಷಕರ ಚಳವಳಿ ಮುಕ್ತಾಯ; ಇಂದಿನಿಂದ ಮೌಲ್ಯಮಾಪನ ಆರಂಭ

ಬೆಂಗಳೂರು, ಏ. 22– ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಹಾಗೂ ಶಿಕ್ಷಣ ಸಚಿವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ವಿಶ್ವಾಸ ಮತ್ತು ಕಳಕಳಿಯಿಂದ ನೀಡಿದ ಆಶ್ವಾಸನೆಯನ್ನು ಅನುಸರಿಸಿ, ಇಂದು ರಾತ್ರಿ 10:15ರ ಸಮಯದಲ್ಲಿ ವಿಧಾನಪರಿಷತ್‌ ಸದಸ್ಯ ಶ್ರೀ ಮಳ್ಳೂರು ಆನಂದರಾವ್‌ ಅವರು ತಮ್ಮ ಅನಿರ್ದಿಷ್ಟ ಕಾಲದ ಉಪವಾಸವನ್ನು ನಿಲ್ಲಿಸಿದರು.

ಕಳೆದ ಏಳು ದಿನಗಳಿಂದ ಮೌಲ್ಯಮಾಪನ ಬಹಿಷ್ಕಾರ ಚಳವಳಿ ನಡೆಸುತ್ತಿದ್ದ ಮಾಧ್ಯಮಿಕ ಶಿಕ್ಷಣ ಅಧ್ಯಾಪಕರು ಚಳವಳಿಯನ್ನು ನಿಲ್ಲಿಸಿ ನಾಳೆಯಿಂದ ಮೌಲ್ಯಮಾಪನ ಕೆಲಸಕ್ಕೆ ಹಾಜರಾಗಲು ನಿರ್ಧರಿಸಿದರು.

ADVERTISEMENT

***

ರಾಜಕೀಯಕ್ಕಾಗಿ ಚಳವಳಿ ಬಳಕೆ 

ಬೆಂಗಳೂರು, ಏ. 22– ಶಿಕ್ಷಕರ ಚಳವಳಿಯನ್ನು ಶಿಕ್ಷಕರ ಮುಖಾಂತರ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಶ್ರೀ ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ಆಪಾದಿಸಿದರು. ‘ಮುಖಂಡರ ಇಂಥ ಕೆಲಸಕ್ಕೆ ಬೆಂಬಲ ನೀಡಿದರೆ ನಿಮ್ಮ ವೃತ್ತಿಗೇ ದೋಷ’ ಎಂದು ಶಿಕ್ಷಕರಿಗೆ ಸ್ಪಷ್ಟಪಡಿಸಿದ ಸಚಿವರು, ‘ಒಪ್ಪಂದದ ಪ್ರಕಾರ ಮತ್ತೆ ಮೌಲ್ಯಮಾಪನ ಕೆಲಸ ಪ್ರಾರಂಭ ಮಾಡಿ’ ಎಂದು ಮನವಿ ಮಾಡಿದರು. 

ಶಿಕ್ಷಕರ ಚಳವಳಿ ಕುರಿತಾದ ನಿಲುವಳಿ ಸೂಚನೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅವರು, ಶಿಕ್ಷಕರ ನಿವೃತ್ತಿ ವಯಸ್ಸನ್ನು 58ರಿಂದ 55ಕ್ಕೆ ಇಳಿಸುವ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಂಡಿರುವುದರಿಂದ ಅದನ್ನು ಮತ್ತೆ ಏರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.