‘ವಿಜಯನಗರ ಉಕ್ಕು ಕಾರ್ಖಾನೆಸ್ಥಾಪನೆಗೆ ಸರ್ಕಾರ ಬದ್ಧ’
ನವದೆಹಲಿ, ನವೆಂಬರ್ 16– ಮೈಸೂರು ರಾಜ್ಯದ ವಿಜಯನಗರ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎರಡು ಹೊಸ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಉಕ್ಕು ಮತ್ತು ಗಣಿ ಖಾತೆ ಸಚಿವ ಮೋಹನ ಕುಮಾರಮಂಗಳಂ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.
ಸದರಿ ಉಕ್ಕು ಕಾರ್ಖಾನೆಗಳ ಗಾತ್ರ ಮತ್ತು ತತ್ಸಂಬಂಧಿ ವಿಷಯಗಳ ಬಗ್ಗೆ ಸರ್ಕಾರ ಈಗ ಪರಿಶೀಲನೆ ನಡೆಸುತ್ತಿದೆ. ಎರಡೂ ಕಾರ್ಖಾನೆಗಳ ಕಾರ್ಯಸಾಧ್ಯತೆಯ ವರದಿಗಳನ್ನು ಈಗ ಪರಿಶೀಲಿಸಲಾಗುತ್ತಿದ್ದು, ನಂತರ ಸರ್ಕಾರದ ನೀತಿಗೆ ಅನುಗುಣವಾಗಿ ಈ ಕಾರ್ಖಾನೆಗಳನ್ನು ನಡೆಸಲು ಹೊಸ ಸಂಸ್ಥೆಗಳನ್ನು ರಚಿಸಲಾಗುವುದು ಎಂದೂ ಸಚಿವರು ಹೇಳಿದರು.
ಹತೋಟಿ ರೇಖೆ: ರಾಜಕೀಯ ಮಟ್ಟದ ಚರ್ಚೆಗೆ ಭುಟ್ಟೋ ಪತ್ರವಿಲ್ಲ–ಪ್ರಧಾನಿ
ನವದೆಹಲಿ, ನವೆಂಬರ್ 16– ಜಮ್ಮು ಕಾಶ್ಮೀರದಲ್ಲಿ ಹತೋಟಿ ರೇಖೆ ಗುರುತಿಸುವ ಪ್ರಶ್ನೆಯನ್ನು ರಾಜಕೀಯ ಮಟ್ಟದಲ್ಲಿ ಇತ್ಯರ್ಥಪಡಿಸಬೇಕೆಂದು ಸೂಚಿಸುವ ಯಾವ ಪತ್ರವೂ ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರಿಂದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬಂದಿಲ್ಲ.
ಇಲ್ಲಿ ಕೆಲವು ದಿನಗಳ ಹಿಂದೆ ಕರಾಚಿಯ ‘ಡಾನ್’ ಪತ್ರಿಕೆಯ ಬಾತ್ಮೀದಾರ ಗಜೀಮುಲ್ಲಾ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಅವರು, ‘ಭುಟ್ಟೋ ಹಾಗೂ ನಮ್ಮ ನಡುವೆ ಪತ್ರ ವ್ಯವಹಾರ ನಡೆಯುತ್ತಿದ್ದಾಗ್ಯೂ ಅವರಿಂದ (ಭುಟ್ಟೋ) ಇಂಥ ಸಲಹೆ ಯಾವುದೂ ಬಂದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.