ವೈದ್ಯರ ಮನವಿ ಪತ್ರದ ಒಕ್ಕಣೆ: ಸಚಿವರ ಆಕ್ಷೇಪ
ಬೆಂಗಳೂರು, ಅ. 8–‘ಆಸ್ಪತ್ರೆಯಲ್ಲಿ ಯಾರು ಹೇಗೆ ಸತ್ತರೂ ಕೇಳಬಾರದು. ಹಾಗಾದರೆ ನಾವು (ಸರ್ಕಾರ) ಏಕಿರಬೇಕು?’
–ವಾಣಿವಿಲಾಸ ಆಸ್ಪತ್ರೆಯ ಮಹಿಳಾ ವೈದ್ಯರೊಬ್ಬರನ್ನು ಸಸ್ಪೆಂಡ್ ಮಾಡಿರುವ ಸಂಬಂಧದಲ್ಲಿ ಬೆಂಗಳೂರಿನಲ್ಲಿ ನಿನ್ನೆ ವೈದ್ಯರು ನಡೆಸಿದ ಪ್ರದರ್ಶನ ಹಾಗೂ ವೈದ್ಯರು ಕಳುಹಿಸಿರುವ ಮನವಿಯ ಬಗ್ಗೆ ಆರೋಗ್ಯ ಸಚಿವ ಶ್ರೀ ವೈ.ರಾಮಕೃಷ್ಣ ಅವರ ತೀವ್ರ ಪ್ರತಿಕ್ರಿಯೆ ಇದು.
ವೈದ್ಯರ ಮನವಿಯಲ್ಲಿನ ಕಠಿಣ ಪದಗಳು ಹಾಗೂ ಬೆದರಿಕೆಯ ಮಾತುಗಳನ್ನು ಸಚಿವರು ತೀವ್ರವಾಗಿ ಆಕ್ಷೇಪಿಸಿದರು.
ಆಗಸ್ಟ್ ತಿಂಗಳಿನಲ್ಲಿ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಯಾದ ಕೆಲ ದಿನಗಳಲ್ಲಿ ಶ್ರೀಮತಿ ಕೃಷ್ಣವೇಣಿ ಎಂಬುವರು ನಿಧನರಾದ ಸಂಬಂಧದಲ್ಲಿ, ಕಾಫಿ ಬೋರ್ಡಿನಲ್ಲಿ ಗುಮಾಸ್ತರಾಗಿರುವ ಅವರ ಪತಿ ಆರು ಪುಟಗಳ ಸುದೀರ್ಘ ಮನವಿಯನ್ನು ತಮಗೆ ಮತ್ತಿತರರಿಗೆ ಒಪ್ಪಿಸಿದುದಾಗಿಯೂ ಆ ಮನವಿಯಲ್ಲಿದ್ದ ಆಪಾದನೆಗಳು ತೀವ್ರತರವಾಗಿದ್ದವೆಂದೂ ತಿಳಿಸಿದರು.
ಸಾಮಾನ್ಯರಲ್ಲಿ ಹೆಚ್ಚು ಕನ್ನಡದ ಅಭಿಮಾನ
ಬೆಂಗಳೂರು, ಅ. 8– ಸಾಮಾನ್ಯ ಜನರಲ್ಲಿ ಇರುವ ಕನ್ನಡ ಅಭಿಮಾನ ಉನ್ನತ ಪದವಿಯಲ್ಲಿರುವ ಕನ್ನಡಿಗರಲ್ಲಿಲ್ಲ.
ಮುಂಬಯಿಗೆ ಭೇಟಿ ನೀಡಿ ಹಿಂದಿರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ನಾರಾಯಣ ಅವರು ಅಲ್ಲಿ ತಾವು ಕಂಡ ಪರಿಸ್ಥಿತಿಯನ್ನು ಇಂದು ವರದಿಗಾರರಿಗೆ ವಿವರಿಸಿ ‘ಉನ್ನತ ಪದವಿಯಲ್ಲಿರುವವರ ಮನೆಯಲ್ಲಿ ಕನ್ನಡದ ಸಂಪರ್ಕವೇ ಇಲ್ಲವಾಗಿದೆ’ ಎಂದು ವಿಷಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.