ಹೊಸ ಮಾದರಿ ಎಸ್ಎಸ್ಎಲ್ಸಿ ಪರೀಕ್ಷೆ ಇಂದು ಆರಂಭ
ಬೆಂಗಳೂರು, ಏ. 25– ಸುಮಾರು ಒಂದು ಲಕ್ಷ 22 ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಸೋಮವಾರ ಪ್ರಾರಂಭವಾಗಲಿ ರುವ ಮೈಸೂರು ಎಸ್ಎಸ್ಎಲ್ಸಿ ಪುನರ್ವಿಮರ್ಶಿತ ಯೋಜನೆ ಪರೀಕ್ಷೆಗೆ ಕುಳಿತಿದ್ದಾರೆ.
ಪುನರ್ವಿಮರ್ಶಿತ ಯೋಜನೆ ಪರೀಕ್ಷಾ ಕ್ರಮವನ್ನು ಜಾರಿಗೆ ತಂದಿರುವುದು ಇದೇ ಮೊದಲ ಬಾರಿ. ಅದರಲ್ಲಿ ಐಚ್ಛಿಕ ವಿಷಯಗಳು ಸೇರಿಲ್ಲ.
ಮತ್ತೊಂದು ಗಮನಾರ್ಹ ಅಂಶವೆಂದರೆ, ಯಾವುದೇ ಪ್ರಶ್ನೆಪತ್ರಿಕೆ ಯಲ್ಲಿ ಶೇ 35ರಷ್ಟು ಅಂಕ ಗಳಿಸಿದಲ್ಲಿ ಆ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ನಪಾಸಾದರೂ ಮುಂದಿನ ಬಾರಿ ಆ ವಿಷಯದಲ್ಲಿ ಪರೀಕ್ಷೆಗೆ ಕೂರಬೇಕಾಗಿಲ್ಲ. ಈಗಾಗಲೇ ಮುಕ್ತಾಯವಾದ ಹಳೇ ಕ್ರಮದ ಎಸ್ಎಸ್ಎಲ್ಸಿ ಪರೀಕ್ಷೆಗೆ 82,200 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕುಳಿತಿದ್ದರು.
‘ಹಿಂದುಳಿದವರ ಪ್ರಗತಿಗೆ ಪ್ರಯತ್ನ ಪಡದಿದ್ದರೆ ಹಿಂದೂ ಧರ್ಮಕ್ಕೆ ಅಪಾಯ ಖಚಿತ’
ಬೆಂಗಳೂರು, ಏ. 25– ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಯತ್ನಿಸದಿದ್ದಲ್ಲಿಹಿಂದೂ ಧರ್ಮಕ್ಕೆ ಅಪಾಯವಿದೆಯೆಂದು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಇಂದು ಇಲ್ಲಿ ಎಚ್ಚರಿಕೆ ನೀಡಿದರು.
ವಿಶ್ವ ಹಿಂದೂ ಪರಿಷತ್ ವ್ಯವಸ್ಥೆ ಮಾಡಿದ್ದ ನಗರ ಸಮ್ಮೇಳನವನ್ನು ಬಸವನಗುಡಿಯ ವಾಸವಿ ಧರ್ಮಶಾಲೆ ಯಲ್ಲಿ ಉದ್ಘಾಟಿಸಿದ ಅವರು, ‘ನಮ್ಮ ಧರ್ಮ ಹೊರಗಿನ ಆಕ್ರಮಣಕ್ಕೆ ಭಯಪಡಬೇಕಾಗಿಲ್ಲ; ನಮ್ಮ ಶತ್ರು ನಮ್ಮಲ್ಲೇ ಇದ್ದಾನೆ. ಉದಾಸೀನ, ದೌರ್ಬಲ್ಯ, ಸ್ವಾರ್ಥ ಭಾವನೆಗಳೇ ನಮ್ಮ ಶತ್ರುಗಳು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.