ADVERTISEMENT

50 ವರ್ಷಗಳ ಹಿಂದೆ: ನಷ್ಟ ಕೋಟಿಯಲ್ಲ– ನಾಲ್ಕೇ ಲಕ್ಷ!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 17:58 IST
Last Updated 26 ಮಾರ್ಚ್ 2024, 17:58 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ನಷ್ಟ ಕೋಟಿಯಲ್ಲ– ನಾಲ್ಕೇ ಲಕ್ಷ! 

ನವದೆಹಲಿ, ಮಾ. 26– ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಮತ್ತು ರೇಡಾರ್‌ ಅಭಿವೃದ್ಧಿ ಸಂಸ್ಥೆಯಲ್ಲಿ (ಎಲ್‌.ಆರ್‌.ಡಿ.ಇ) ಒಂದು ಕೋಟಿ ರೂ. ಯಂತ್ರ ಸಾಮಗ್ರಿ ನಿರುಪಯುಕ್ತವಾಗಿ ಬಿದ್ದಿದೆ ಎಂಬುದು ಸರಿಯಲ್ಲ ಕೇವಲ ನಾಲ್ಕು ಲಕ್ಷ ರೂ. ಯಂತ್ರ ಸಾಮಗ್ರಿ ನಿರುಪಯುಕ್ತವಾಗಿದೆ ಎಂದು ರಕ್ಷಣಾ ಉತ್ಪಾದನ ರಾಜ್ಯ ಸಚಿವ ವಿ.ಸಿ. ಶುಕ್ಲ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.

ದೆಹಲಿ ಪತ್ರಿಕೆಯಲ್ಲಿ ಬಂದಿರುವ ಈ ಸಂಬಂಧದ ಸುದ್ದಿ ಸರಿಯಲ್ಲ ಎಂದು ಗಮನ ಸೆಳೆವ ಸೂಚನೆಯೊಂದಕ್ಕೆ ಉತ್ತರ ನೀಡಿದ ಅವರು ಹೇಳಿದರು. ಎಲ್‌.ಆರ್‌.ಡಿ.ಇ. ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು. ‘ಆ ಸಂಸ್ಥೆಯ ಹೆಸರಿಗೆ ಕಳಂಕ ಹಚ್ಚುವ ಯತ್ನ ನಡೆದಿದ್ದು ವಿಷಾದಕರ’ ಎಂದು ಅವರು ನುಡಿದರು.

ADVERTISEMENT

ತಿರುಪತಿ ಬೆಟ್ಟದಲ್ಲಿ ಯಾತ್ರಾರ್ಥಿಗಳ ಬಸ್‌ ಉರುಳಿ ಏಳು ಸಾವು

ತಿರುಪತಿ, ಮಾ. 26– ತಿರುಪತಿಬೆಟ್ಟಕ್ಕೆ ಹೋಗುತ್ತಿದ್ದ ತಿರುಪತಿ ದೇವಸ್ಥಾನದ ಬಸ್ಸೊಂದು ಇಂದು ಬೆಳಿಗ್ಗೆ ಮಂಜಿನಿಂದ ಮಬ್ಬುಕವಿದಿದ್ದಾಗ ಘಾಟಿ ರಸ್ತೆಯ ಪಕ್ಕದ ಅಡ್ಡಕಟ್ಟೆಗೆ ಡಿಕ್ಕಿ ಹೊಡೆದು 200 ಅಡಿಗಳಷ್ಟು ಕೆಳಕ್ಕೆ ಉರುಳಿದಾಗ ಏಳುಮಂದಿ ಸತ್ತು 25 ಜನ ಗಾಯಗೊಂಡರು.

ಬಸ್‌ ಚಾಲಕನೂ ಸತ್ತುಹೋದ. ಕಂಡಕ್ಟರ್‌ ಎರಡು ಕಣ್ಣುಗಳನ್ನು ಕಳೆದುಕೊಂಡನೆಂದು ವರದಿಯಾಗಿದೆ.

ಅಪಘಾತ ಇಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಸಂಭವಿಸಿತು. 42 ಜನ ಪ್ರಯಾಣಿಕರಿದ್ದ ಆ ಬಸ್ಸು ಘಾಟಿ ರಸ್ತೆಯಲ್ಲಿ ಹತ್ತು ಮೈಲಿ ಹತ್ತಿದ್ದು, ದೇವಸ್ಥಾನಕ್ಕೆ ಇನ್ನು ಕೇವಲ 2 ಮೈಲಿ ಹೊಗಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.