ಕೊಳ್ಳುವ, ಮಾರುವ ಬೆಲೆ ವಿಪರೀತ: ಏರುವ ಗೋಧಿ ನೀತಿ
ನವದೆಹಲಿ, ಮಾರ್ಚ್ 28– ಒಂದು ವರ್ಷದ ಹಿಂದೆ ಗೋಧಿ ಸಗಟು ವ್ಯಾಪಾರವನ್ನು ಸರಕಾರ ಸ್ವಾಧೀನಪಡಿಸಿಕೊಂಡ ನೀತಿ ಅಂತ್ಯಗೊಂಡು, ಲಭ್ಯವಿರುವ ಗೋಧಿ ಪ್ರಮಾಣ ಹೆಚ್ಚಿಸುವುದಕ್ಕಾಗಿ ಸಂಗ್ರಹ ಮತ್ತು ಸರಕಾರಿ ಮಾರಾಟ ಬೆಲೆಗಳನ್ನು ವಿಪರೀತ ಏರಿಸಿರುವುದನ್ನು ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಫಕ್ರುದ್ದೀನ್ ಅಲೀ ಅಹಮದ್ ಅವರು ಇಂದು ಲೋಕಸಭೆಯಲ್ಲಿ ವಿಧ್ಯುಕ್ತವಾಗಿ ಪ್ರಕಟಿಸಿದರು.
ಹೆಚ್ಚುವರಿ ಫಸಲು ಲಭ್ಯವಿರುವ ರಾಜ್ಯಗಳಲ್ಲಿ ವರ್ತಕರು ಮತ್ತು ಸಹಕಾರಿ ಸಂಸ್ಥೆಗಳು ಕ್ವಿಂಟಲ್ಗೆ 105 ರೂ.ಗಳಂತೆ ಶೇ. 50ರಷ್ಟನ್ನು ಕಡ್ಡಾಯವಾಗಿ ಲೆವಿ ರೂಪದಲ್ಲಿ ಒಪ್ಪಿಸಿ ಉಳಿದುದನ್ನು ಪರ್ಮಿಟ್ ಪಡೆದು ರಾಜ್ಯದಲ್ಲಿ ಅಥವಾ ರಾಜ್ಯದ ಹೊರಗಡೆ ಮಾರಲು ಅವಕಾಶ ಕೊಡುವಂತೆ ಗೋಧಿ ನೀತಿಯನ್ನು ಮಾರ್ಪಡಿಸಲಾಗಿದೆ.
ಹಾನಗಲ್ನ ಗ್ರಾಮಸೇವಕ ಹಾಲಪ್ಪನವರಮಠ ಅವರಿಗೆ ಬಹುಮಾನ
ನವದೆಹಲಿ, ಮಾರ್ಚ್ 28– ಧಾರವಾಡ ಜಿಲ್ಲೆಯ ಹಾನಗಲ್ ಬ್ಲಾಕಿನ ಎಸ್.ಬಿ. ಹಾಲಪ್ಪನವರಮಠ ಅವರಿಗೆ 1972– 73ನೇ ಸಾಲಿನ ಅತ್ಯುತ್ತಮ ಗ್ರಾಮಸೇವಕ ಬಹುಮಾನ ದೊರೆತಿದೆ. ಪಂಜಾಬಿನ ಜಲಂಧರ್ ಜಿಲ್ಲೆಯ ನೂರಮಹಲ್ ಬ್ಲಾಕಿನ ಶ್ರೀಮತಿ ಅಜಿತ್ಕೌರ್ ಅವರು ಅತ್ಯುತ್ತಮ ಗ್ರಾಮಸೇವಿಕೆ ಆಗಿ ಆಯ್ಕೆ ಆಗಿದ್ದಾರೆ.
ಕೇಂದ್ರ ಕೃಷಿ ಸಚಿವ ಫಕ್ರುದ್ದೀನ್ ಅಲೀ ಅಹ್ಮದ್ ಅವರು ಇಂದು ಈ ಇಬ್ಬರು ಬಹುಮಾನ ವಿಜೇತರಿಗೆ 1,850 ರೂ ನಗದು ಬಹುಮಾನ ಮತ್ತು ಅರ್ಹತಾ ಪತ್ರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.