ಎರಡು ದಿನಗಳಲ್ಲಿ ಪಕ್ಷದಿಂದ ಪ್ರಧಾನಿ ಇಂದಿರಾ ಸಸ್ಪೆನ್ಷನ್
ನವದೆಹಲಿ, ನ. 5– ‘ಪ್ರಧಾನ ಮಂತ್ರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಆಲೋಚಿಸಿದ್ದೀರಾ?’ ಎಂದು ವರದಿಗಾರರು ಇಂದು ಇಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಪ್ರಶ್ನಿಸಲು ‘ನನಗೆ ಎರಡು ದಿನ ಅವಕಾಶ ಕೊಡಿ’ ಎಂದು ನಿಜಲಿಂಗಪ್ಪ ಹೇಳಿದರು.
ನವೆಂಬರ್ 17ರಂದು ಸಂಸತ್ ಅಧಿವೇಶನ ಆರಂಭವಾಗುವುದಕ್ಕೆ ಮುಂಚೆಯೇ ಪ್ರಧಾನಮಂತ್ರಿಗಳನ್ನು ಪಕ್ಷದಿಂದ ಉಚ್ಚಾಟನೆಗೊಳಿಸದಿದ್ದರೂ ಕನಿಷ್ಠ ಪಕ್ಷ ಸಸ್ಪೆಂಡ್ ಮಾಡುವಂತೆ ಸಿಂಡಿಕೇಟ್ ಪ್ರಯತ್ನಿಸುವುದೆಂದು ಶ್ರೀ ನಿಜಲಿಂಗಪ್ಪನವರ ಹೇಳಿಕೆಯಿಂದ ಭಾಸವಾಗುತ್ತದೆ.
ಸರ್ಕಾರದ ಖಂಡನೆಯೂ ಇಲ್ಲ ಅನುಮೋದನೆಯೂ ಇಲ್ಲ
ನವದೆಹಲಿ, ನ. 5– ರಬಾತಿನಲ್ಲಿ ಇತ್ತೀಚೆಗೆ ನಡೆದ ಇಸ್ಲಾಮಿ ಸಮ್ಮೇಳನದಲ್ಲಿ ಭಾರತ ಭಾಗವಹಿಸಿದ್ದರ ಬಗ್ಗೆ ಸಂಸತ್ ಕಾಂಗ್ರೆಸ್ ಪಕ್ಷದ ಕಾರ್ಯ ನಿರ್ವಾಹಕ ಸಮಿತಿಯು ಸತತ ಐದು ಗಂಟೆಗಳ ಕಾಲ ಚರ್ಚೆ ನಡೆಸಿ ಸರ್ಕಾರದ ನಿಲುವಿಗೆ ಬೆಂಬಲ ನೀಡದೆ ಅಥವಾ ಖಂಡಿಸದೆ ಚರ್ಚೆಯನ್ನು ಮುಗಿಸಿತು.
ಚರ್ಚೆಯ ಮಧ್ಯೆ ಹೊರಕ್ಕೆ ಬಂದಿದ್ದ ಪ್ರಧಾನಿ ಇಂದಿರಾ ಗಾಂಧಿಯವರು ‘ತೀವ್ರವಾದ ಅಭಿಪ್ರಾಯಭೇದವಿದೆ. ಫಲಿತಾಂಶ ನಿಮಗೆ ಗೊತ್ತೇ ಗೊತ್ತು. ವಿಷಯದ ಬಗ್ಗೆ ಮತಗಳನ್ನು ಪಡೆಯುವ ಪ್ರಮೇಯ ಇಲ್ಲವೆಂದು ಕಾಣುತ್ತದೆ’ ಎಂದು ಸುದ್ದಿಗಾರರಿಗೆ ಹೇಳಿದ್ದರು.
ಸದಸ್ಯರು ಸರ್ಕಾರದ ನೀತಿಯನ್ನು ಅಂಗೀಕರಿಸಿದ್ದಾರೆ ಎಂದು ವಿದೇಶಾಂಗ ಸಚಿವ ದಿನೇಶ್ ಸಿಂಗ್ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.