ಸರ್ಕಾರಿ ಉದ್ಯಮದಲ್ಲಿ ಕಡಿಮೆ ಉತ್ಪಾದನೆ: ಇಂದಿರಾ ಚಿಂತೆ
ರಾಂಚಿ, ಅ. 2– ಸರ್ಕಾರಿ ಉದ್ಯಮರಂಗದ ಅನೇಕ ಘಟಕಗಳಲ್ಲಿ ಉತ್ಪಾದನೆ ಕಡಿಮೆ ಯಾಗಿರುವುದಕ್ಕಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ವ್ಯಥೆ ವ್ಯಕ್ತಪಡಿಸಿ, ಕೊರತೆ ಮತ್ತು ಬೆಲೆ ಏರಿಕೆಗಳಿಗೆ ಇದೂ ಒಂದು ಕಾರಣ ಎಂದರು.
ಆಗ್ನೇಯ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದೆಂದು ಹೇಳಲಾಗಿರುವ 6,000 ಟನ್ಗಳ ಪೋರ್ಚ್ ಪ್ರೆಸ್ ಅನ್ನು ಇಲ್ಲಿನ ಫೌಂಡ್ರಿ ಪೋರ್ಚ್ ಕಾರ್ಖಾನೆಯಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದ ಶ್ರೀಮತಿ ಗಾಂಧಿ ಅವರು, ಕೈಗಾರಿಕಾ ಕಾರ್ಮಿಕರು ಉತ್ಪಾದನೆ ಹೆಚ್ಚಿಸಿ ಸರ್ಕಾರಿ ಉದ್ಯಮರಂಗಕ್ಕೆ ತಟ್ಟಿರುವ ಕಳಂಕ ತಪ್ಪಿಸಬೇಕೆಂದು ಕರೆ ಕೊಟ್ಟರು.
ಮಂಗಳೂರಿನಲ್ಲಿ ಹರಿಜನಹೋಟೆಲ್ ಉದ್ಘಾಟನೆ
ಮಂಗಳೂರು, ಅ. 2– ‘ಈ ವರ್ಷದ ಅಂತ್ಯದೊಳಗಾಗಿ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ ಆಗಬೇಕೆಂದು ಕಾಂಗ್ರೆಸ್ ಸಂಕಲ್ಪ ಮಾಡಿದೆ. ಒಂದೇ ಹಂತದಲ್ಲಿ ಇದು ಸಾಧ್ಯವಾಗದಿದ್ದರೂ ದೇವಸ್ಥಾನಗಳು, ಹೋಟೆಲ್ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಹರಿಜನರಿಗೆ ಯಾವ ಆತಂಕವೂ ಇಲ್ಲದಂತೆ ಮಾಡಲು ತೀವ್ರ ಯತ್ನ ಮಾಡುತ್ತೇವೆ’ ಎಂದು ಸಹಕಾರ ಸಚಿವ ಶ್ರೀ ಎ.ಶಂಕರ ಆಳ್ವ ಅವರು ಇಂದು ಇಲ್ಲಿ ಹೇಳಿದರು.
ಇಲ್ಲಿನ ಕೇಂದ್ರ ಮಾರುಕಟ್ಟೆಯಲ್ಲಿ ಹರಿಜನರಿಂದಲೇ ನಡೆಸಲ್ಪಡುವ ಉಪಾಹಾರ ಗೃಹವನ್ನು ಸಚಿವರು ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.