l ಚುನಾವಣೆ: ಶಿಕ್ಷೆ ವಿವರ ಮುಚ್ಚಿಟ್ಟರೆ ಜೈಲು
ಮುಂಬೈ, ಅಕ್ಟೋಬರ್ 3 (ಪಿಟಿಐ)– ‘ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಪ್ರಮಾಣ ಪತ್ರದಲ್ಲಿ ತಾವು ಹಿಂದೆ ಅನುಭವಿಸಿರುವ ಶಿಕ್ಷೆ ಬಗ್ಗೆ ಮಾಹಿತಿಗಳನ್ನು ಮುಚ್ಚಿಟ್ಟರೆ ಅಂಥವರು ಭಾರತೀಯ ದಂಡ ಸಂಹಿತೆ ಅನ್ವಯ 3 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾದೀತು’ ಎಂದು ಚುನಾವಣಾ ಆಯುಕ್ತ ಜಿ.ವಿ.ಜಿ. ಕೃಷ್ಣಮೂರ್ತಿ ಅವರು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ರಾಜಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಒಂದು ವೇಳೆ ಅಭ್ಯರ್ಥಿ ಪ್ರಮಾಣ ಪತ್ರದಲ್ಲಿ ತನ್ನ ಹಿಂದಿನ ಶಿಕ್ಷೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದರೆ ಅಥವಾ ಆ ಬಗೆಗಿನ ಮಾಹಿತಿಗಳನ್ನು ಮುಚ್ಚಿ ಹಾಕಿದರೆ ಭಾರತೀಯ ದಂಡ ಸಂಹಿತೆ 181ರ ಸೆಕ್ಷನ್ ಅನ್ವಯ ಆತ ಮೂರು ವರ್ಷಗಳ ಕಾಲ ಸೆರೆಮನೆ ವಾಸದ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
l ಭಾರತ – ಪಾಕ್ ಮಾತುಕತೆಗೆಅಮೆರಿಕ ಬೆಂಬಲ
ನ್ಯೂಯಾರ್ಕ್,ಅಕ್ಟೋಬರ್ 3 (ಪಿಟಿಐ)– ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಭಾರತ ಹಾಗೂ ಪಾಕಿಸ್ತಾನಗಳು ಪರಿಹರಿಸಿಕೊಳ್ಳಲು ತನ್ನ ಬೆಂಬಲವನ್ನು ಪುನರುಚ್ಚರಿಸಿರುವ ಅಮೆರಿಕವು, ಈ ದೇಶಗಳ ದ್ವಿಪಕ್ಷೀಯ ಮಾತುಕತೆಯಲ್ಲಿ ಹಸ್ತಕ್ಷೇಪ ಮಾಡುವ ಇಚ್ಚೆ ತನಗಿಲ್ಲ ಎಂದು ಮತ್ತೆ ಘೋಷಿಸಿದೆ.
‘ಆದರೂ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ತಾನೇನು ಮಾಡಲು ಸಾಧ್ಯವೋ, ಅದಕ್ಕೆ ಸಿದ್ಧ’ ಎಂಬ ಅಮೆರಿಕದ ನಿಲುವನ್ನು ಅದರ ವಿದೇಶಾಂಗ ಕಾರ್ಯದರ್ಶಿ ಮೆಡಿಲಿನ್ ಅಲ್ಬ್ರೈಟ್ ಅವರು ನಿನ್ನೆ ತಮ್ಮನ್ನು ಭೇಟಿ ಮಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಗೊಹರ್ ಅಯೂಬ್ ಖಾನ್ ಅವರಿಗೆ ಇಲ್ಲಿ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.