ಕಾರ್ಮಿಕ ಸಂಘಗಳು ಪಕ್ಷ ರಾಜಕೀಯದಿಂದ ದೂರವಿರಲು ಸಾಧ್ಯವಿಲ್ಲ: ಅರಸು
ಬೆಂಗಳೂರು, ಜೂನ್ 16– ಭಾರತದ ಜನತಂತ್ರ ವ್ಯವಸ್ಥೆಯಲ್ಲಿ ಕಾರ್ಮಿಕ ಸಂಘಗಳು ಪಕ್ಷ ರಾಜಕೀಯದಿಂದ ದೂರವಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಬಂದಿದ್ದಾರೆ.
‘ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕ ಸಂಘಗಳ ಮೇಲೆ ರಾಜಕೀಯ ಪಕ್ಷಗಳು, ವ್ಯಕ್ತಿಗಳ ಪ್ರಭಾವ ಬಿದ್ದೇ ತೀರುತ್ತದೆ. ಕಾರ್ಮಿಕರ ಬೆಂಬಲ ನಿರೀಕ್ಷಿಸುವ ಪಕ್ಷಗಳು ಯಾವುದಾದರೊಂದು ರೀತಿಯಲ್ಲಿ ಕಾರ್ಮಿಕ ಸಂಘಗಳಲ್ಲಿ ಪ್ರವೇಶ ದೊರಕಿಸಿಕೊಳ್ಳುತ್ತವೆ ಎಂದು ಅವರು ಹೇಳಿದರು.
ಕೈಗಾರಿಕೆಗಳಲ್ಲಿ ಕಾರ್ಮಿಕ ಸಂಘಗಳ ಪೈಪೋಟಿ ಮತ್ತು ಅದರ ಪರಿಣಾಮಗಳ ವಿಶ್ಲೇಷಣೆಗಾಗಿ ನಗರದಲ್ಲಿ ಏರ್ಪಾಟಾದ ಎರಡು ದಿನಗಳ ವಿಚಾರಗೋಷ್ಠಿಯ ಮುಕ್ತಾಯ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಶ್ರೀ ಅರಸು ಅವರು ಮಾತನಾಡುತ್ತಿದ್ದರು.
ಇದ್ದಿಲು ಸರಬರಾಜಿನಲ್ಲಿ ಅಕ್ರಮ: 11 ಜನ ನೌಕರರ ಮೇಲೆ ಉಗ್ರ ಕ್ರಮ
ಭದ್ರಾವತಿ, ಜೂನ್ 16– ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಇದ್ದಿಲು ಸರಬರಾಜಿಗೆ ಸಂಬಂಧಪಟ್ಟ ಅಕ್ರಮ ವ್ಯವಹಾರಗಳ ಬಗ್ಗೆ ನಡೆದ ತನಿಖೆಯ ಪರಿಣಾಮವಾಗಿ, ಇದಕ್ಕೆ ನೇರವಾಗಿ ಸಂಬಂಧಪಟ್ಟ, ಕಾರ್ಖಾನೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಹನ್ನೊಂದು ಜನ ನೌಕರರ ಮೇಲೆ ಉಗ್ರ ಕ್ರಮ ಕೈಗೊಳ್ಳಲಾಗಿದೆಯೆಂದು ತಿಳಿದುಬಂದಿದೆ.
ಈ ಪೈಕಿ ಫೆರ್ರೋ ಅಲಾಯ್ ಪ್ಲಾಂಟ್ನ ಒಬ್ಬ ಅಸಿಸ್ಟೆಂಟ್ ಫೋರ್ಮನ್ ಹಾಗೂ ಮೇನ್ ಗೇಟಿನ ಇಬ್ಬರು ವಾಚ್ಮನ್ಗಳನ್ನು ಕೆಲಸದಿಂದ ವಜಾ ಮಾಡಲಾಗಿದೆಯೆಂದೂ ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.