ನಿರುದ್ಯೋಗ ಪರಿಸ್ಥಿತಿ: ಸದಾಕಾಲ ವಿಮರ್ಶೆಗೆ ಸರ್ವಪಕ್ಷ ಸಮಿತಿ
ನವದೆಹಲಿ, ಅ. 20– ರಾಷ್ಟ್ರದಲ್ಲಿ ವಿಷಮಿಸುತ್ತಿರುವ ನಿರುದ್ಯೋಗ ಪರಿಸ್ಥಿತಿ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಸದಾಕಾಲ ವಿಚಾರ ವಿನಿಮಯ ನಡೆಸುವುದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿರುವ ಸಮಿತಿಯೊಂದನ್ನು ಸದ್ಯದಲ್ಲೇ ರಚಿಸುವ ನಿರೀಕ್ಷೆಯಿದೆ.
ತಮ್ಮ ಸಚಿವ ಶಾಖೆಗೆ ಸಂಬಂಧಿಸಿದ ಸಂಸತ್ ಸದಸ್ಯರ ಸಲಹಾ ಸಮಿತಿ ಸದಸ್ಯರು, ಬೆಳೆಯುತ್ತಿರುವ ನಿರುದ್ಯೋಗದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಅದರ ನಿವಾರಣೆಗಾಗಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕಾಗಿ ಇಂದು ಒತ್ತಾಯಪಡಿಸಿ ದಾಗ ಕೇಂದ್ರ ಹಣಕಾಸು ಸಚಿವ ವೈ.ಬಿ. ಚವಾಣ್ ಅವರು ಈ ಸಲಹೆಯನ್ನು ಸೂಚಿಸಿ, ಪ್ರಧಾನಿಯೊಡನೆ ಅದನ್ನು ಚರ್ಚಿಸುವುದಾಗಿ ತಿಳಿಸಿದರು.
ದೇಶದಲ್ಲಿ ನಿರುದ್ಯೋಗ ಅಗಾಧವಾಗಿ ಬೆಳೆಯುತ್ತಿದೆಯೆಂದು ಒಪ್ಪಿಕೊಂಡ ಚವಾಣ್ ಅವರು, ಅದರ ನಿವಾರಣೆಗಾಗಿ ನೀತಿಯೊಂದನ್ನು ರಚಿಸಲು ಸಚಿವ ಸಂಪುಟ ದಲ್ಲಿ ಚರ್ಚೆ ನಡೆಸುವ ಹೊಣೆಗಾರಿಕೆಯನ್ನು ಖುದ್ದಾಗಿ ಪ್ರಧಾನಿ ಇಂದಿರಾ ಗಾಂಧಿಯವರೇ ವಹಿಸಿಕೊಂಡಿದ್ದಾರೆಂದು ತಿಳಿಸಿದರು.
ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ
ನ್ಯೂಯಾರ್ಕ್ ನಗರ, ಅ. 20– ಜಗತ್ತಿನಲ್ಲೇ ಅತ್ಯಂತ ಎತ್ತರದ ಕಟ್ಟಡ ಎನ್ನುವ ಹೆಮ್ಮೆಯ ಪ್ರಶಸ್ತಿಯನ್ನು ಇಲ್ಲಿನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ನಿನ್ನೆ ಕಳೆದುಕೊಂಡಿತು. ವಿಶ್ವ ವಾಣಿಜ್ಯ ಕೇಂದ್ರವು ಈ ಪ್ರಶಸ್ತಿಯನ್ನು ಗಳಿಸಿತು.
102 ಅಂತಸ್ತು ಇರುವ ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ (1,250 ಅಡಿಗಳು), ನಿರ್ಮಾಣವಾಗುತ್ತಿರುವ ವಿಶ್ವ ವಾಣಿಜ್ಯ ಕೇಂದ್ರವು ನಿನ್ನೆ ಕೆಲವು ಅಡಿಗಳೆತ್ತರ ಬೆಳೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.