ಚಂದ್ರಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ವಾಪಸ್
ಐವೊಜಿಮಾ ನೌಕೆ, ಏ. 17– ಮೃತ್ಯುವನ್ನು ಬೆನ್ನಿಗೆ ಕಟ್ಟಿಕೊಂಡು ಬಾಹ್ಯಾಕಾಶದಲ್ಲಿ ನಾಲ್ಕು ಕಳವಳಕಾರಕ ದಿನಗಳನ್ನು ಕಳೆದ ಅಮೆರಿಕದ ಅಪೊಲೊ– 13ರ ಮೂವರು ಗಗನಯಾತ್ರಿಗಳು ಇಂದು ರಾತ್ರಿ ಭಾರತೀಯ ಕಾಲ 11.38 ಗಂಟೆಗೆ ಸುರಕ್ಷಿತವಾಗಿ ಭೂಮಿಗೆ ಹಿಂತಿರುಗಿದರು. ಅವರ ನೌಕೆ ಶಾಂತಿಸಾಗರದಲ್ಲಿ ನಿಶ್ಚಯಿಸಲಾಗಿದ್ದ ಸ್ಥಳದಲ್ಲಿ ನೇರವಾಗಿ ಇಳಿಯಿತು.
ಜೇಮ್ಸ್ ಲೊವೆಲ್, ಜಾನ್ ಸ್ವಿಗರ್ಟ್ ಮತ್ತು ಫ್ರೆಡ್ ಹೈಸ್ ಅವರಿದ್ದ ಮಾತೃನೌಕೆಯನ್ನು ಹೆಕ್ಕಿಕೊಳ್ಳಲು ಜೆಟ್ ಹೆಲಿಕಾಪ್ಟರ್ಗಳು ಶರವೇಗದಿಂದ ಸಾಗಿದವು. ದಣಿದ ಗಗನಯಾತ್ರಿಗಳನ್ನು ಕರೆದುಕೊಳ್ಳಲು ಕಾದಿದ್ದ ವಿಮಾನ ವಾಹಕ ನೌಕೆ ‘ಐವೊಜಿಮಾ’ ನಾಲ್ಕು ಮೈಲಿ ದೂರದಲ್ಲಿ ಕಾದಿತ್ತು.
ಹೊಸಪೇಟೆಗೆ ಉಕ್ಕು ಕಾರ್ಖಾನೆ
ನವದೆಹಲಿ, ಏ. 17– ಹೊಸಪೇಟೆಯಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸುವ ನಿರ್ಧಾರವನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಪ್ರಕಟಿಸಿದರು.
ಇದರ ಜೊತೆಗೆ ವಿಶಾಖಪಟ್ಟಣ ಮತ್ತು ಸೇಲಂನಲ್ಲೂ ಮತ್ತೆರಡು ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು. ಈ ಕಾರ್ಖಾನೆ
ಗಳಿಗಾಗಿ 110 ಕೋಟಿ ರೂ.ಗಳ ಅವಕಾಶ ಮಾಡಿರುವುದಾಗಿಯೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.