ರಾಜ್ಯ ಸಂಪುಟದ ವಿರುದ್ಧ 40 ಶಾಸಕರ ದೂರು
ಬೆಂಗಳೂರು, ಏ. 15– ರಾಜ್ಯದ ಆಡಳಿತ ಕಾಂಗ್ರೆಸ್ ಹಾಗೂ ಕೆಲ ಇತರ ಪಕ್ಷಗಳ ಸುಮಾರು 40 ಮಂದಿ ಶಾಸಕರ ಮನವಿಯೊಂದನ್ನು ದೆಹಲಿಯಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರುಗಳಿಗೆ ಅರ್ಪಿಸಿ ಅದರಲ್ಲಿ ರಾಜ್ಯದ ಮಂತ್ರಿಮಂಡಲದ ವಿರುದ್ಧ ನಮೂದಿಸಿರುವ ಆರು ಆಪಾದನೆಗಳ ಬಗ್ಗೆ ನ್ಯಾಯಾಂಗಾಧಿಕಾರಿಯಿಂದ ವಿಚಾರಣೆ ನಡೆಸಬೇಕೆಂದು ಒತ್ತಾಯ ಮಾಡಲಾಗಿದೆಯೆಂದು ತಿಳಿದುಬಂದಿದೆ.
ಆಡಳಿತ ಕಾಂಗ್ರೆಸ್ನ ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಲು ತೆರಳಿದ ರಾಜ್ಯ ಅಡ್ಹಾಕ್ ಸಮಿತಿಯ ಸಂಚಾಲಕ ಶ್ರೀ ಡಿ.ದೇವರಾಜ್ ಅರಸ್ ಹಾಗೂ ವಿಧಾನಸಭಾ ಸದಸ್ಯ ಎಚ್.ಎಂ. ಚನ್ನಬಸಪ್ಪ ಮತ್ತಿತರರು ಈಗ ದೆಹಲಿಯಲ್ಲಿದ್ದಾರೆ.
ಅಪೊಲೊ – 13ಕ್ಕೆ ಭೂಮಿಯ ಪ್ರಭಾವದ ಅನುಭವ
ಹ್ಯೂಸ್ಟನ್, ಏ. 15– ಯಾಂತ್ರಿಕ ತೊಂದರೆಗಳಿಗೀಡಾಗಿರುವ ಅಮೆರಿಕದ ಚಂದ್ರನೌಕೆ ಅಪೊಲೊ– 13, ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವದಿಂದ ಪಾರಾಗಿ ಇಂದು ರಾತ್ರಿ 7.08ರ (ಭಾರತೀಯ ಕಾಲ) ಸಮಯದಲ್ಲಿ ಭೂಮಿಯ ಪ್ರಭಾವದ ಅನುಭವ ಪಡೆಯಿತು.
ಜೀವರಕ್ಷಕ ಆಮ್ಲಜನಕ, ನೀರು ಮತ್ತು ವಿದ್ಯುತ್ ಒದಗಿಸುವ ಅನೇಕ ಯಂತ್ರ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡದೆ ಇರುವ ಈ ಚಂದ್ರ ನೌಕೆಯಲ್ಲಿ ಮೂವರು ಗಗನಯಾತ್ರಿಗಳು ಇನ್ನೂ ಎರಡು ದಿನಗಳ ಕಾಲ ಇರಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.