ಮೀನುಗಾರಿಕೆ ಮಂತ್ರಿಗೆ ವರ್ಷಕ್ಕೆ ಒಂದು ತಿಂಗಳು ಕೋಲಾರ ಪ್ರವಾಸವೇಕೆ?
ಬೆಂಗಳೂರು, ಸೆ. 28– ಎರಡು ವರ್ಷಗಳ ಅವಧಿಯಲ್ಲಿ ಸುಮಾರು 41,000 ರೂಪಾಯಿಗಳನ್ನು ಪ್ರವಾಸಗಳಿಗಾಗಿ ಖರ್ಚು ಮಾಡಿರುವ ಮೀನುಗಾರಿಕೆ ಇಲಾಖೆ ಸಚಿವ ಶ್ರೀ ಎಚ್.ಸಿ.ಲಿಂಗಾರೆಡ್ಡಿ ‘ಅವರನ್ನು ಮುಖ್ಯಮಂತ್ರಿಗಳು ಮಂತ್ರಿಮಂಡಲದಿಂದ ತೆಗೆದರೆ ಒಳ್ಳೆಯದಲ್ಲವೇ?’ ಎಂದು ಅದೇ ಜಿಲ್ಲೆಯ ಹಾಗೂ ಅದೇ ಪಕ್ಷದ (ಸಂಸ್ಥಾ ಕಾಂಗ್ರೆಸ್) ಸದಸ್ಯ ಶ್ರೀ ಸಿ.ಎಂ.ಪುಟ್ಟಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ಕೇಳಿದರು.
ಪ್ರಶ್ನೋತ್ತರ ಕಾಲದಲ್ಲಿ ಸಾಕಷ್ಟು ಸುದೀರ್ಘ ಚರ್ಚೆ, ರಸಮಯ ಸನ್ನಿವೇಶಗಳಿಗೆ ವಸ್ತುವಾದ ಮಂತ್ರಿಯವರ ಪ್ರವಾಸಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ನೀಡಿದ ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ‘ಮಂತ್ರಿಗಳು ತಿಂಗಳಿಗೆ 10 ದಿವಸಕ್ಕಿಂತ ಹೆಚ್ಚು ಕಾಲ ಪ್ರವಾಸ ಮಾಡಬಾರದು ಎಂಬುದು ಮಂತ್ರಿಮಂಡಲದ ಸದಸ್ಯರು ಮಾಡಿಕೊಂಡಿರುವ ನಿಯಮ. ಅದನ್ನು ಎಲ್ಲ ಮಂತ್ರಿಗಳೂ ಪಾಲಿಸುವರೆಂದು ನಂಬಿಕೆ’ ಎಂದು ಶ್ರೀ ಭಾಸ್ಕರ ಶೆಟ್ಟಿ ಅವರಿಗೆ ತಿಳಿಸಿದರು.
ಮಂತ್ರಿಯಿಂದ ಸಣ್ಣ ಅಧಿಕಾರಿವರೆಗೆ ಲಂಚದ ಆರೋಪ
ಬೆಂಗಳೂರು, ಸೆ. 28– ಸಚಿವರಿಂದ ಹಿಡಿದು ಸಣ್ಣ ಅಧಿಕಾರಿವರೆಗೆ ಆರೋಗ್ಯ ಇಲಾಖೆಯಲ್ಲಿ ಲಂಚ ತೆಗೆದುಕೊಳ್ಳುತ್ತಿದ್ದಾರೆಂದು ಪಕ್ಷೇತರ ಸದಸ್ಯ ಶ್ರೀ ವಾಟಾಳ್ ನಾಗರಾಜ್ ಅವರು ಇಂದು ವಿಧಾನಸಭೆಯಲ್ಲಿ ಉಗ್ರ ಆಪಾದನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.