ಜಾತಿ–ಸಮಾಜ ಸೂತ್ರ ಆಧರಿಸಿ ಹಿಂದುಳಿದವರ ವರ್ಗೀಕರಣಕ್ಕೆ ಒತ್ತಾಯ
ಬೆಂಗಳೂರು, ನ. 8– ಹಿಂದುಳಿದ ವರ್ಗದವರು ಯಾರು ಎಂಬುದನ್ನು ನಿರ್ಧರಿಸಲು ಆರ್ಥಿಕ ಸ್ಥಿತಿಗತಿಗಳ ಆಧಾರ ಅನುಸರಿಸುವ ಬದಲು ‘ದೇಶದ ಪರಿಸ್ಥಿತಿಗೆ ಅನುಗುಣವಾದ ಜಾತಿ ಮತ್ತು ಸಮಾಜ ಸೂತ್ರವನ್ನು’ ತಕ್ಷಣ ಜಾರಿಗೆ ತರಬೇಕು ಎಂದು ರಾಜ್ಯದ ದುರ್ಬಲ ವರ್ಗಗಳ ಪ್ರತಿನಿಧಿಗಳ ಸಮ್ಮೇಳನವು ಸರ್ಕಾರಕ್ಕೆ ಕರೆ ನೀಡಿದೆ.
ಸಂವಿಧಾನಗಳ ಪ್ರಕಾರ ಸೌಕರ್ಯ, ಸವಲತ್ತು ದೊರೆಯಬೇಕಾಗಿರುವ ರಾಜ್ಯದ ಹಿಂದುಳಿದ ವರ್ಗದ ಜನರಿಗೆ ರಾಜ್ಯದಲ್ಲಿ ಈಗ ಅನುಸರಣೆಯಾಗುತ್ತಿರುವ ಆರ್ಥಿಕ ಸ್ಥಿತಿಗತಿಯ ಸೂತ್ರದಿಂದ ಅಪಾರವಾಗಿ ಹಾನಿ ತಟ್ಟಿದೆ ಎಂದು ಸಮ್ಮೇಳನವು ಅಂಗೀಕರಿಸಿರುವ ನಿರ್ಣಯವು ಹೇಳಿದೆ.
ಮಾಯವಾದ ‘ಯಶ, ಬಲ’
ಹೈದರಾಬಾದ್, ನ. 8– ಕೇಂದ್ರ ಹಣಕಾಸು ಸಚಿವ ಚವಾಣ್ರು ತಮ್ಮ ಹೆಸರಿನಲ್ಲಿರುವ ಯಶ ಮತ್ತು ಬಲ ಎರಡನ್ನೂ ಕಳೆದುಕೊಂಡ ವ್ಯಕ್ತಿ ಈಗ. (ಚವಾಣರ ಪೂರ್ತಿ ಹೆಸರು: ಯಶವಂತರಾವ್ ಬಲವಂತರಾವ್ ಚವಾಣ್).
ಸಂಸ್ಥಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪಿ.ವೆಂಕಟಸುಬ್ಬಯ್ಯನವರು ಇಲ್ಲಿ ಇಂದು ಈ ವಿಚಾರವನ್ನು ವ್ಯಂಗ್ಯವಾಗಿ ಪ್ರಸ್ತಾಪಿಸಿ, ‘ಕೇಂದ್ರ ಗೃಹ ಸಚಿವರಾಗಿದ್ದಾಗ ಚವಾಣರು ಭಾರಿ ಪ್ರತಿಷ್ಠೆ ಮತ್ತು ಜನಪ್ರಿಯತೆ ಹೊಂದಿದ್ದರು. ಆದರೆ, ಹಿಂಬಡ್ತಿಯ ನಂತರವೂ ಇಂದಿರಾಗೆ ಸೇವಾಕರ್ತರಾಗಿ ಉಳಿಯಲು ನಿರ್ಧರಿಸಿ ಅದನ್ನು ಕಳೆದುಕೊಂಡಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.