ADVERTISEMENT

ನಾಯಕತ್ವಕ್ಕೆ ಅಜಯ್, ಎಡ ಕಮ್ಯುನಿಸ್ಟರ ನಡುವೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 17:31 IST
Last Updated 16 ಫೆಬ್ರುವರಿ 2019, 17:31 IST

ನಾಯಕತ್ವಕ್ಕೆ ಅಜಯ್, ಎಡ ಕಮ್ಯುನಿಸ್ಟರ ನಡುವೆ ಪೈಪೋಟಿ

ಕಲ್ಕತ್ತ, ಫೆ. 16– ಪಶ್ಚಿಮ ಬಂಗಾಳದಲ್ಲಿ ಎರಡನೆ ಸಂಯುಕ್ತ ರಂಗ ಸಂಪುಟದ ನಾಯಕತ್ವ ತಮ್ಮ ಪಕ್ಷಕ್ಕೇ ದೊರೆಯಬೇಕೆಂಬುದು ಮಾರ್ಕ್ಸ್‌ವಾದಿ ಕಮ್ಯುನಿಸ್ಟರ ನಾಯಕ ಜ್ಯೋತಿ ಬಸು ಒತ್ತಾಯ.

ತಾವು ಮುಖ್ಯಮಂತ್ರಿಯಾಗದಿದ್ದರೆ ಸಂಪುಟದಿಂದ ಹೊರಗಿರಲು ಅಜಯ್ ಮುಖರ್ಜಿ ನಿರ್ಧರಿಸಿರುವುದಾಗಿ ವರದಿ.

ADVERTISEMENT

ಗೆದ್ದು ಬಂದಿರುವ ಸಂಯುಕ್ತ ರಂಗದ ಅಭ್ಯರ್ಥಿಗಳಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟರದೇ ಅಧಿಕ ಸಂಖ್ಯೆ ಆದ್ದರಿಂದ ನಾಯಕತ್ವ ತಮ್ಮ ಪಕ್ಷಕ್ಕೆ ದೊರೆಯಬೇಕು ಎಂದು ಜ್ಯೋತಿಬಸು ಇಂದು ಇಲ್ಲಿ ಒತ್ತಾಯ ಮಾಡಿದರು.

ಅಲ್ಲದೆ ಸರ್ಕಾರದ ಕೆಲವು ಮುಖ್ಯ ಇಲಾಖೆಗಳನ್ನು ಮಾರ್ಕ್ಸ್‌ವಾದಿ ಕಮ್ಯುನಿಸ್ಟರಿಗೆ ಕೊಡಬೇಕೆಂದು ಕೇಳಿದರು.

ಬಿಹಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ಪಿ.ಎಸ್.ಪಿ. ಪ್ರಯತ್ನ

ನವದೆಹಲಿ, ಫೆ. 15– ಬಿಹಾರದಲ್ಲಿ ಸಂಪುಟ ಸ್ಥಾಪಿಸಲು ಕಾಂಗ್ರೆಸ್ಸಿಗೆ ತಮ್ಮ ಪಕ್ಷವು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರ ನೀಡುವ ಪ್ರಶ್ನೆ ಇಲ್ಲವೇ ಇಲ್ಲವೆಂದು ಪ್ರಜಾ ಸಮಾಜವಾದಿ ಪಕ್ಷದ ಅಧ್ಯಕ್ಷ ಶ್ರೀ ಎನ್.ಜಿ. ಗೋರೆ ಅವರು ಇಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಸಮಗ್ರ ಚಹ

ನವದೆಹಲಿ, ಫೆ. 16– ಕುಡಿಯಲು ಬೇಗನೆ ಸಿದ್ಧ ಮಾಡಬಹುದಾದಂತಹ ಚಹ ಇದೀಗ ತಯಾರಾಗಿದೆ.

ಪುಡಿಯ ರೂಪದಲ್ಲಿರುವ ಇದರ ಹೆಸರು: ‘ಸಮಗ್ರ ಚಹ’. ಒಂದು ಕಪ್ ಚಹ ತಯಾರಿಸಲು 12 ಪೈಸೆ ವೆಚ್ಚ.

ಹಾಲಿನ ಪುಡಿ ತಯಾರಿಸುವ ಯಂತ್ರಗಳಲ್ಲಿಯೇ ಈ ಚಹಾ ಪುಡಿಯನ್ನೂ ತಯಾರಿಸಬಹುದು.

ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ಕಂಡು ಹಿಡಿದಿರುವ ಈ ಹೊಸ ಪುಡಿಯಿಂದ ದೇಶದ ಟೀ ರಫ್ತು ಹೆಚ್ಚುವುದು ಸಾಧ್ಯ.

ರಾಜ್ಯದಲ್ಲಿ ಮುಸುಕಿನ ಜೋಳ ಸಂಸ್ಕರಣ ಯಂತ್ರ: ಇಟಲಿ ಕೊಡುಗೆ

ಬೆಂಗಳೂರು, ಫೆ. 16– ಭಾರತಕ್ಕೆ ಇಟಲಿ ಸರ್ಕಾರದ ಉಡುಗೊರೆಯಾದ ಮುಸುಕಿನ ಜೋಳ ಸಂಸ್ಕರಣ ಯಂತ್ರವನ್ನು ಮುಕ್ಕಾಲುಪಾಲು ಮೈಸೂರು ರಾಜ್ಯದಲ್ಲಿ ಸ್ಥಾಪಿಸಲಾಗುವುದು.

ಐವತ್ತು ಟನ್ ತೂಕವಿರುವ ಈ ಯಂತ್ರ ಸ್ಥಾಪನೆಯ ಸ್ಥಳವನ್ನು ಆಹಾರ ಕಾರ್ಪೋರೇಷನ್ ಶೀಘ್ರದಲ್ಲೇ ನಿರ್ಧರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.