ಫಿರೋಜ್ಪುರ ಜೈಲಿನಲ್ಲಿ ಗಲಭೆ: ಗುಂಡೇಟು; ಐವರ ಸಾವು
ಫಿರೋಜ್ಪುರ, ಮಾ. 27– ಫಿರೋಜ್ಪುರದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಗಲಭೆ ಮಾಡಿದ ಕೈದಿಗಳನ್ನು ಚದುರಿಸಲು ಇಂದು ಪೊಲೀಸರು ಗುಂಡು ಹಾರಿಸಿದಾಗ ಐದು ಜನ ಸತ್ತು ನಲವತ್ತಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿವೆ. ಒಬ್ಬ ಡೆಪ್ಯುಟಿ ಸೂಪರಿಂಟೆಂಡೆಂಟರೂ ಸೇರಿ ನಲವತ್ತು ಜನ ಪೊಲೀಸರು ಗಾಯಗೊಂಡಿದ್ದಾರೆ. ಕಿರುಚಾಡುತ್ತಿದ್ದ ಕೈದಿಗಳು ಹಾಗೂ ಪೊಲೀಸರ ನಡುವೆ ಇಡೀ ದಿನ ನಡೆದ ಹೋರಾಟದಲ್ಲಿ ಕೈದಿಗಳು ಕಿಟಕಿ ಸಲಾಕೆ, ಕಲ್ಲು ಮತ್ತು ಇಟ್ಟಿಗೆ ಚೂರುಗಳನ್ನು ಬಳಸಿದರೆಂದು ಇತ್ತೀಚಿನ ವರದಿಗಳು ತಿಳಿಸುತ್ತವೆ.
ಉದ್ರಿಕ್ತರಾದ ಕೈದಿಗಳನ್ನು ಚದುರಿಸಲು ಪೊಲೀಸರು ಮೊದಲು ಮೇಲಿಂದ ಮೇಲೆ ಅಶ್ರುವಾಯು ಪ್ರಯೋಗ ಮಾಡಿದರು. ಆದರೆ ಗಲಭೆಕೋರ ಕೈದಿಗಳನ್ನು ಹತೋಟಿಗೆ ತರುವ ಪೊಲೀಸರ ಈ ಪ್ರಯತ್ನ ಅಯಶಸ್ವಿಯಾಯಿತು.
ಇಬ್ಬರು ಕನ್ನಡಿಗರ ಎರಡು ಹಿಂದೀ ಪುಸ್ತಕಕ್ಕೆ ಬಹುಮಾನ
ನವದೆಹಲಿ, ಮಾ. 27– ಹಿಂದಿಯೇತರ ರಾಜ್ಯಗಳ ಹಿಂದೀ ಸಾಹಿತಿಗಳ ಹದಿನಾಲ್ಕು ಪುಸ್ತಕಗಳನ್ನು ಪ್ರಥಮ ಮತ್ತು ದ್ವಿತೀಯ ಬಹುಮಾನಗಳಿಗೆ ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನದ ಮೊತ್ತ ಒಂದು ಸಾವಿರ ರೂಪಾಯಿ, ಎರಡನೆಯ ಬಹುಮಾನ ಐದು ನೂರು ರೂಪಾಯಿ.
ಕನ್ನಡದ ಡಾ. ಸರೋಜಿನಿ ಮಹಿಷಿ ಯವರ ‘ಅತಿಥಿ ಸತ್ಕಾರ’ ಹಿಂದೀ ಪುಸ್ತಕಕ್ಕೆ ಪ್ರಥಮ ಬಹುಮಾನ ಮತ್ತು ಗುರುನಾಥ್ ಜೋಶಿಯವರು ಹಿಂದಿಯಲ್ಲಿ ರಚಿಸಿರುವ ‘ಕನ್ನಡ ಸಾಹಿತ್ಯ ಕಿ ರೂಪರೇಖ’ ಪುಸ್ತಕಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.