ತೆಲಂಗಾಣ ಸದಸ್ಯರಿಂದ ಆಂಧ್ರ ಕಾಂಗ್ರೆಸ್ ಶಾಸಕ ಪಕ್ಷದ ಸಭೆಗೆ ಬಹಿಷ್ಕಾರ
ಹೈದರಾಬಾದ್, ಜುಲೈ 5– ಆಂಧ್ರ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರ ‘ರಾಜೀನಾಮೆಯನ್ನು’ ಪರಿಶೀಲಿಸುವುದಕ್ಕಾಗಿ ನಾಳೆ ಇಲ್ಲಿ ಸಭೆ ಸೇರಲಿರುವ ಕಾಂಗ್ರೆಸ್ ಶಾಸಕ ಪಕ್ಷದ ಸಭೆಯನ್ನು ಬಹಿಷ್ಕರಿಸಲು ತೆಲಂಗಾಣ ಪ್ರದೇಶದ 38 ಮಂದಿ ಕಾಂಗ್ರೆಸ್ ಶಾಸಕರು ಇಂದು ನಿರ್ಧರಿಸಿದರು.ಇಂದು ಬೆಳಿಗ್ಗೆ ಇಲ್ಲಿ ನಡೆದ ಶಾಸಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಗೊತ್ತಾಗಿದೆ.
ಈ ಬೆಳಿಗ್ಗೆ ನಡೆದ ಸಭೆಯಲ್ಲಿ ಆಂಧ್ರ ವಿಧಾನ ಸಭೆಯ 30 ಮಂದಿ ಸದಸ್ಯರೂ ಮತ್ತು ವಿಧಾನ ಪರಿಷತ್ತಿನ 8 ಮಂದಿ ಸದಸ್ಯರೂ ಈ ಸಭೆಯಲ್ಲಿ ಭಾಗವಹಿಸಿದ್ದರೆಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ವೃತ್ತಗಳು ತಿಳಿಸಿವೆ.
ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು: ವೀರೇಂದ್ರರ ಕರೆ
ಮೈಸೂರು, ಜುಲೈ 5– ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಎಚ್ಚರಿಸಿದರು.‘ಶಿಕ್ಷಣ ಕ್ಷೇತ್ರದಲ್ಲಿ ಯಾವಾಗ ರಾಜಕೀಯ ಬರುತ್ತದೋ ಆಗ ಶಿಕ್ಷಣ ಕುಂಠಿತಗೊಳ್ಳುತ್ತದೆ’ ಎಂದರು ಅವರು.
‘ಆದ್ದರಿಂದ ಶಿಕ್ಷಣ ರಾಜಕಾರಣಿಗಳ ಕೈಗೆ ಹೋಗದ ಹಾಗೆ ನೋಡಿಕೊಳ್ಳಬೇಕು. ಹಾಗೆ ಆದಾಗ ಮಾತ್ರ ಶಿಕ್ಷಣದ ಬೆಳವಣಿಗೆ ಸುಸೂತ್ರವಾಗಿ ಆಗುತ್ತದೆ’ ಎಂದೂ ಅವರು ಹೇಳಿದರು.
ಬಿ.ಎಸ್ಸಿ; 10ರಲ್ಲಿ 9 ರ್ಯಾಂಕ್ ನ್ಯಾಷನಲ್ ಕಾಲೇಜಿಗೆ
ಬೆಂಗಳೂರು, ಜುಲೈ 5– 1969ರಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಯ 10 ರ್ಯಾಂಕುಗಳಲ್ಲಿ ನ್ಯಾಷನಲ್ ಕಾಲೇಜ್ ಪ್ರಥಮ ರ್ಯಾಂಕೂ ಸೇರಿ ಒಟ್ಟು 9 ರ್ಯಾಂಕ್ಗಳನ್ನು ಪಡೆದು ವಿಕ್ರಮ ಸ್ಥಾಪಿಸಿದೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಇಷ್ಟು ಸಂಖ್ಯೆಯಲ್ಲಿ ರ್ಯಾಂಕುಗಳನ್ನು ಒಂದು ಕಾಲೇಜ್ ಪಡೆದಿರುವುದು ಇದೇ ಪ್ರಥಮ. 10 ರ್ಯಾಂಕುಗಳಲ್ಲಿ ಏಳನೇ ರ್ಯಾಂಕನ್ನು ಸೆಂಟ್ ಜೋಸೆಫ್ ಕಾಲೇಜ್ ಗಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.