ಪಾರ್ಲಿಮೆಂಟ್ ಇತಿಹಾಸದಲ್ಲಿ ಪ್ರಥಮ: ಲೋಕಸಭೆಯಲ್ಲಿ ಇಬ್ಬರು ಸದಸ್ಯರ ನಡುಗೆ ಗುದ್ದಾಟ
ನವದೆಹಲಿ, ಡಿ. 22– ಭಾರತ ಸಂಸತ್ ಇತಿಹಾಸದಲ್ಲಿ ಪ್ರಥಮ ಭಾರಿಗೆ ಇಂದು ಲೋಕಸಭೆಯಲ್ಲಿ ಇಬ್ಬರು ಸದಸ್ಯರು ಗುದ್ದಾಡಲಾರಂಭಿಸಿದರು. ಸ್ಪೀಕರ್ ಧಿಲ್ಲಾನ್ ಸಭೆಯನ್ನು ಅರ್ಧಗಂಟೆ ಮುಂದಕ್ಕೆ ಹಾಕಬೇಕಾಯಿತು.
ಒಂದ ಕಡೆ ಪಿ.ಎಸ್.ಪಿ. ಸದಸ್ಯ ಕೆ. ಲಕ್ಕಪ್ಪ ಮತ್ತು ಐ.ಎಸ್.ಪಿ. ಸದಸ್ಯ ಎ. ಶ್ರೀಧರನ್, ಇನ್ನೊಂದು ಕಡೆ ಮಾರ್ಕ್ಸಿಸ್ಟ್ ಸದಸ್ಯರು ಪರಸ್ಪರ ಬೈಗುಳ ಹಾಗೂ ಕೂಗಾಟ, ಕಿರುಚಾಟಗಳಲ್ಲಿ ತೊಡಗಿದ್ದಾಗ, ಲಕ್ಕಪ್ಪನವರು ಮಾರ್ಕ್ಸಿಸ್ಟ್ ಸದಸ್ಯ ಸತ್ಯನಾರಾಯಣ್ ಸಿಂಗ್ರ ಕಡೆಗೆ ಧಾವಿಸಿ ಬಂದರು. ಇಬ್ಬರೂ ಹೊಡೆದಾಡಲಾರಂಭಿಸಿದರು.
ಹತ್ತಿರವಿದ್ದ ಸದಸ್ಯರು ಹೊಡೆದಾಟವನ್ನು ಬಿಡಿಸಿದರು. ಲಕ್ಕಪ್ಪನವರನ್ನು ಸಭೆಯಿಂದ ಹೊರಕ್ಕೆ ಕೆಲವು ಸದಸ್ಯರು ಕರೆದೊಯ್ದರು. ಸಭೆಯನ್ನು ಮುಂದಕ್ಕೆ ಹಾಕಿರುವುದಾಗಿ ಸ್ಪೀಕರ್ ಪ್ರಕಟಿಸಿದರು.
ಖೋಟಾ ನೋಟು ಪ್ರಕರಣ: 11 ಮಂದಿಗೆ 7 ವರ್ಷ ಕಠಿಣ ಶಿಕ್ಷೆ
ಶಿವಮೊಗ್ಗ, ಡಿ. 22– ಶಿವಮೊಗ್ಗೆಯ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಧೀಶರಾದ ಶ್ರೀ ಬಿ. ಹನುಮಂತಯ್ಯ ಅವರು ಇಂದು ನೂರು ರೂಪಾಯಿ ಖೋಟಾ ನೋಟು ಪ್ರಕರಣದ 11 ಆಪಾದಿತರಿಗೆ ತಲಾ ಏಳುವರ್ಷ ಕಠಿಣ ಶಿಕ್ಷೆ ಹಾಗೂ ಒಂದು ಸಹಸ್ರ ರೂಪಾಯಿ ದಂಡ, ದಂಡ ಕೊಡಲು ತಪ್ಪಿದರೆ ಮತ್ತೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.