ಸಂಸ್ಥಾ ಕಾಂಗ್ರೆಸ್ ಭದ್ರನೆಲೆಗೆ ಪೆಟ್ಟು: ಮಂಡ್ಯ ಜಿಲ್ಲೆ ಹಲವು ಪ್ರಮುಖರು ಆಡಳಿತ ಕಾಂಗ್ರೆಸ್ ಪಕ್ಷಕ್ಕೆ
ಮಂಡ್ಯ, ಸೆ. 27– ಸಂಸ್ಥಾ ಕಾಂಗ್ರೆಸ್ಸಿನ ಭದ್ರ ನೆಲೆಗಳಲ್ಲಿ ಒಂದಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಅದರ ಹಲವು ಪ್ರಮುಖ ನಾಯಕರು ಆಡಳಿತ ಕಾಂಗ್ರೆಸ್ಸಿಗೆ ಇಂದು ಸೇರಿದ್ದರಿಂದ ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ಸಿಗೆ ಭಾರಿ ಪೆಟ್ಟು ಬಿದ್ದಿದೆ. ಮೈಸೂರು ಪ್ರದೇಶ ಸಂಸ್ಥಾ ಕಾಂಗ್ರೆಸ್ ಉಪಾಧ್ಯಕ್ಷರೂ ಜಿಲ್ಲೆಯ ಪ್ರಮುಖ ನಾಯಕರೂ ಮಾಜಿ ಮಂತ್ರಿಗಳೂ ಆದ ಶ್ರೀ ಕೆ.ವಿ. ಶಂಕರಗೌಡ ಮತ್ತು ಜಿಲ್ಲಾ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಜಿ. ಮಾದೇಗೌಡ ಅವರು ಇಂದು ಆಡಳಿತ ಕಾಂಗ್ರೆಸ್ಸಿಗೆ ಸೇರಿದ ಪ್ರಮುಖರಲ್ಲಿ ಸೇರಿದ್ದಾರೆ.
‘ಯಾವ ಪೂರ್ವಭಾವಿ ಷರತ್ತೂ ಇಲ್ಲದೆ’ ಆಡಳಿತ ಕಾಂಗ್ರೆಸ್ಸಿಗೆ ಸೇರಿದ್ದಾರೆಂದು ಹೇಳಲಾಗಿದೆ.
ಕಂದಾಯ ಸಚಿವ ಶ್ರೀ ಎನ್. ಹುಚ್ಚಮಾಸ್ತಿ ಗೌಡ, ಎಂ.ಪಿ.ಸಿ.ಸಿ (ಆ) ಪ್ರಧಾನ ಕಾರ್ಯದರ್ಶಿ ಶ್ರೀ ರಾಘವೇಂದ್ರ ರಾವ್ ಜಹಗೀರ್ದಾರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಹೋಲ್ಡಿಂಗ್ ಕಂಪನಿ ಆಗಿ ಎಚ್.ಎಂ.ಟಿ
ನವದೆಹಲಿ, ಸೆ. 27– ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಕಾರ್ಖಾನೆಯನ್ನು ‘ಹೋಲ್ಡಿಂಗ್ ಕಂಪನಿ’ಯಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇಂಥ ಹೋಲ್ಡಿಂಗ್ ಕಂಪನಿಯಲ್ಲಿ ಎಚ್.ಎಂ.ಟಿ ಎರಡನೆಯದು. ಉಕ್ಕು ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮಗಳಿಗಾಗಿ ‘ಹೋಲ್ಡಿಂಗ್ ಕಂಪನಿ’ಯೊಂದನ್ನು ನವೆಂಬರ್ ಅಂತ್ಯದ ವೇಳೆಗೆ ಸ್ಥಾಪಿಸಲು ಸರ್ಕಾರ ಈಗಾಗಲೇ ನಿರ್ಧರಿಸಿದ್ದು ಎಂ.ಎ.ವಾದೂದ್ ಖಾನ್ ಎಂಬುವರನ್ನು ಇದರ ಅಧ್ಯಕ್ಷರಾಗಿ ನೇಮಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.