ಕಾಂಗ್ರೆಸ್ ಒಡಕಿಗೆ ನೀಲಂ ಕಾರಣ: ಗುರುಪಾದಸ್ವಾಮಿ
ನವದೆಹಲಿ, ಮೇ 26– ನೀಲಂ ಸಂಜೀವ ರೆಡ್ಡಿ ಅವರು ಪಕ್ಷದ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ ಕ್ರಮವನ್ನು ಸಂಸ್ಥಾ ಕಾಂಗ್ರೆಸ್ ಸಂಸತ್ ಪಕ್ಷದ ಸರ್ವಸದಸ್ಯರ ಸಭೆಯು ಒಪ್ಪಲಿಲ್ಲ.
ಸಂಜೀವ ರೆಡ್ಡಿ ಅವರು ತಮ್ಮ ಈ ಕ್ರಮದಿಂದ ತಮಗೇ ಅಪಚಾರ ಮಾಡಿಕೊಂಡಿದ್ದಾರೆ. ತಮ್ಮ ಸಲುವಾಗಿಯೇ ಕಾಂಗ್ರೆಸ್ ಪಕ್ಷದಲ್ಲಿ ಒಡಕುಂಟಾಯಿತೆಂಬುದನ್ನು ರೆಡ್ಡಿಯವರು ಮನವರಿಕೆ ಮಾಡಿಕೊಳ್ಳದಿರುವುದು ವಿಷಾದನೀಯ ಎಂದು ರಾಜ್ಯಸಭೆಯಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷದ ನಾಯಕ ಎಂ.ಎಸ್.ಗುರುಪಾದಸ್ವಾಮಿ ನುಡಿದರು.
ಪಕ್ಷವು ಪ್ರಗತಿಪರ ಧೋರಣೆ ಹೊಂದಿರಬೇಕು; ಹಿರಿಯ ತಲೆಗಳು ಅಧಿಕಾರದಿಂದಿಳಿಯಬೇಕು ಮತ್ತು ಪಕ್ಷವು ತನ್ನ ಹಿಂದಿನ ತಪ್ಪುಗಳನ್ನು ಒಪ್ಪಿಕೊಳ್ಳಬೇಕೆಂದು ರೆಡ್ಡಿ ಅವರು ಮುಂಬೈ ಅಧಿವೇಶನದಲ್ಲಿ ಸೂಚಿಸಿದ ಪ್ರಶ್ನೆಗಳಿಗೆ ಈಗಾಗಲೇ ಉತ್ತರಿಸಲಾಗಿದೆ. ಇಂಥ ಕ್ರಮ ಕೈಗೊಳ್ಳಲು ಯಾವ ಕಾರಣವೂ ಇಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.
‘ಪಾಕ್ ದಾಳಿಗೆ ಭಾರತದ ಪಡೆ ಜಗ್ಗಿಲ್ಲ’
ನವದೆಹಲಿ, ಮೇ 26– ಪೂರ್ವ ಬಂಗಾಳದಿಂದ ಭಾರತದ ಮೇಲೆ ದಾಳಿ ನಡೆಸುತ್ತಿರುವ ಪಾಕ್ ಸೈನಿಕರ ಮೇಲೆ ಭಾರತೀಯ ಗಡಿ ರಕ್ಷಣಾ ಪಡೆಯವರು ಸೂಕ್ತ ರೀತಿಯಲ್ಲಿ ಪ್ರತಿದಾಳಿ ನಡೆಸಿ, ಗಡಿಯನ್ನು ಉಲ್ಲಂಘಿಸಿದ ಸಂದರ್ಭಗಳಲ್ಲೆಲ್ಲ ಅವರನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸ್ವರಣ್ ಸಿಂಗ್ ಇಂದು ರಾಜ್ಯಸಭೆಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.