ಬಂಗ್ಲಾ ಸಮಸ್ಯೆ: ಶೀಘ್ರ ರಾಜಕೀಯ ಪರಿಹಾರಕ್ಕೆ ಇಂದಿರಾ–ಟಿಟೋ ಕರೆ
ನವದೆಹಲಿ, ಅ. 20– ಬಂಗ್ಲಾದೇಶದ ಸಮಸ್ಯೆ ಬಗ್ಗೆ ಪೂರ್ವ ಬಂಗಾಳದ ಜನರ ಚುನಾಯಿತ ಪ್ರತಿನಿಧಿಗಳಿಗೆ ಒಪ್ಪಿಗೆಯಾಗುವಂಥ ರಾಜಕೀಯ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯವೆಂದು ಇಂದು ಬೆಳಿಗ್ಗೆ ಇಲ್ಲಿ ನೀಡಿದ ಭಾರತ– ಯುಗೋಸ್ಲಾವಿಯಾ ಜಂಟಿ ಪ್ರಕಟಣೆ ಕರೆ ಇತ್ತಿದೆ.
ಈ ರಾಜಕೀಯ ಪರಿಹಾರವು ಪೂರ್ವ ಬಂಗಾಳದ ಜನರ ಆಸೆ– ಆಕಾಂಕ್ಷೆಗಳು ಹಕ್ಕುಗಳು ಹಾಗೂ ಕಾನೂನು ಬದ್ಧ ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕೆಂದೂ ಆ ಪ್ರಕಟಣೆ ತಿಳಿಸಿದೆ.
ಬಂಗ್ಲಾ ದೇಶದ ನಿರಾಶ್ರಿತರ ಸಮಸ್ಯೆಗೆ ಪರಿಹಾರ ಹುಡುಕುವುದನ್ನು ಮುಂದಕ್ಕೆ ಹಾಕಿದರೆ ’ಪರಿಸ್ಥಿತಿಯ ತೀವ್ರ ಉಲ್ಬಣಕ್ಕೆ’ ಅವಕಾಶವಾಗುವ ಸಂಭವವಿದೆ ಎಂದು ಎಚ್ಚರಿಸಿದೆ.
ಉಕ್ಕು ಕಾರ್ಖಾನೆಯಿಂದ ಬಾರಿ ಲಾಭ ಗಳಿಕೆ ನಿರೀಕ್ಷೆ
ಬೆಂಗಳೂರು, ಅ. 20– ಇದುವರೆಗೆ ನಷ್ಟದಲ್ಲಿ ನಡೆಯುತ್ತಿದ್ದ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಈ ವರ್ಷ ಒಂದು ಕೋಟಿ ರೂ. ಲಾಭ ಸಂಪಾದಿಸುವ ನಿರೀಕ್ಷೆ ಇದೆ.
ಕಳೆದ ಆರು ತಿಂಗಳ ಅವಧಿಯಲ್ಲಿ ಕಾರ್ಖಾನೆ 35 ಲಕ್ಷ ಲಾಭ ಗಳಿಸಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಅದು ಎರಡು ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿತ್ತು.
ಮಂಗಳೂರಿನ ರಾಸಾಯನಿಕ ಗೊಬ್ಬರ ಕಾರ್ಖಾನೆಯಲ್ಲಿ ಇನ್ನು ಒಂದೆರಡು ತಿಂಗಳಲ್ಲಿ ಯಂತ್ರಗಳ ಸ್ಥಾಪನೆ ಕಾರ್ಯಾರಂಭವಾಗುವನಿರೀಕ್ಷೆ ಇದೆ.
ಸರ್ಕಾರಿ ಉದ್ಯಮಗಳಲ್ಲಿ ಮಂಡ್ಯದ ಮೈಸೂರು ಅಸಿಟೇಟ್ ಆಂಡ್ ಕೆಮಿಕಲ್ಸ್ ಸಂಸ್ಥೆಯನ್ನುಳಿದು ಇತರ ಕಾರ್ಖಾನೆಗಳು ಲಾಭ ಗಳಿಸುವ ಹಾದಿಯಲ್ಲಿ ಮುನ್ನಡೆ ಸಾಧಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.