ADVERTISEMENT

50 ವರ್ಷಗಳ ಹಿಂದೆ | ಬುಧವಾರ, 12–8–1970

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST
   

ಶಬ್ದಗಳ ಕೊರತೆ ಬರೀ ನೆಪ: ಕನ್ನಡವನ್ನು ಹಿಂದಕ್ಕೆ ತಳ್ಳಿ ಇಂಗ್ಲಿಷ್‌ ಉಳಿಸುವ ಕುತಂತ್ರ
ಬೆಂಗಳೂರು, ಆ. 11–
ರಾಜ್ಯ ಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರಲು ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ನೆರವನ್ನೂ ನೀಡುವುದೆಂದು ಪರಿಷತ್‌ ಅಧ್ಯಕ್ಷ ಶ್ರೀ ಜಿ.ನಾರಾಯಣ ಅವರು ಇಂದು ಇಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಬರುವ ರಾಜ್ಯೋತ್ಸವದ ದಿನದಿಂದ ಸಬ್‌ಡಿವಿಜನ್‌ ಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡುವುದಾಗಿ ಸರ್ಕಾರ ಘೋಷಿಸಿರುವುದನ್ನು ಸ್ವಾಗತಿಸಿದರು.

ಕನ್ನಡವನ್ನು ಆಡಳಿತ ಭಾಷೆಯಾಗಿ ತರಲು ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂಬ ಆಕ್ಷೇಪಣೆಯನ್ನು ಶ್ರೀ ನಾರಾಯಣ ಪ್ರಸ್ತಾಪಿಸಿ, ‘ಇಂಥ ಭಾಷೆ ಬೇಕು, ಬೇಡ ಎನ್ನುವ ಹಕ್ಕು ಜನತೆಗೆ ಇದೆಯೇ ವಿನಾ ಅಧಿಕಾರಿಗೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ನಕ್ಸಲೀಯರು– ಉಗ್ರವಾದಿ ಚಟುವಟಿಕೆಗಳ ದಮನಕ್ಕೆ ಎಲ್ಲ ಶಕ್ತಿ ಬಳಕೆ: ಇಂದಿರಾ
ನವದೆಹಲಿ, ಆ. 11–
ನಕ್ಸಲೀಯರು ಮತ್ತಿತರ ಉಗ್ರಗಾಮಿಗಳ ಚಟುವಟಿಕೆಗಳನ್ನು ‘ನಮಗಿರುವ ಎಲ್ಲ ಶಕ್ತಿಯನ್ನೂ ಪ್ರಯೋಗಿಸಿ’ ಮೆಟ್ಟಿ ಹಾಕಲು ಸರ್ಕಾರ ಕೃತಸಂಕಲ್ಪ ಮಾಡಿದೆಯೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಸಭೆಗೆ ತಿಳಿಸಿದರು. ನಾವು ಅಂತಹವರ ವಿರುದ್ಧ ‘ಕೊನೆಯವರೆಗೆ ಹೋರಾಡುತ್ತೇವೆ’ ಎಂದವರು ಘೋಷಿಸಿದರು.

ಈ ಅಧಿವೇಶನ ಪ್ರಾರಂಭವಾದ ನಂತರ ಮೂರನೆಯ ಬಾರಿಗೆ ಪ್ರಶ್ನೋತ್ತರ ಕಾಲದ ಬಹುತೇಕ ಸಮಯ, ನಕ್ಸಲೀಯರು ಮತ್ತಿತರ ಉಗ್ರಗಾಮಿಗಳಿಂದ ಎರಗಿರುವ ಗಂಡಾಂತರಕ್ಕೆ ವಿನಿಯೋಗವಾಗಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.