15 ಶಾಸಕರ ಪಕ್ಷಾಂತರ: ವೀರೇಂದ್ರ ಸಂಪುಟಕ್ಕೆ ಗಂಡಾಂತರ
ಬೆಂಗಳೂರು, ಮಾರ್ಚ್ 17– ಇಂದು ಪಾದರಸ ಸದೃಶ ರಭಸದಿಂದ ನಡೆದ ಬೆಳವಣಿಗೆಯಿಂದಾಗಿ ರಾಜ್ಯದ ಮಂತ್ರಿ ಮಂಡಲ ಉರುಳಿ ಹೋಗುವ ಪರಿಸ್ಥಿತಿ ಉಂಟಾಗಿದೆ.
ವಿಧಾನಸಭೆಯ 15 ಮಂದಿ ಸಂಸ್ಥಾ ಕಾಂಗ್ರೆಸ್ ಸದಸ್ಯರು ಆಡಳಿತ ಕಾಂಗ್ರೆಸ್ಗೆ ಪಕ್ಷಾಂತರಗೊಂಡು, ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಬಹುಮತ ಕಳೆದು ಕೊಂಡಿದ್ದಾರೆಂದು ಆಡಳಿತ ಕಾಂಗ್ರೆಸ್ ನಾಯಕರು ಘೋಷಿಸಿದುದೇ ಅಲ್ಲದೆ ರಾಜ್ಯಪಾಲರಿಗೂ ತಿಳಿಸಿದರು.
ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಜೆ ಅವಸರದಲ್ಲಿ ಸೇರಿದ ಸಂಸ್ಥಾ ಕಾಂಗ್ರೆಸ್ ಸಭೆ ಶ್ರೀ ವೀರೇಂದ್ರ ಪಾಟೀಲ್ ಅವರ ನಾಯಕತ್ವದಲ್ಲಿ ವಿಶ್ವಾಸವನ್ನು ಪ್ರತಿಪಾದಿಸಿ, ನಾಲ್ಕು ತಿಂಗಳ ಕಾಲದ ಬಜೆಟನ್ನು ಅಂಗೀಕರಿಸಿದ ನಂತರ ಮುಂದಿನ ಮಾರ್ಪಾಡು ಕುರಿತು ಚರ್ಚಿಸಲು ತೀರ್ಮಾನಿಸಿತು.
ಸಂಸತ್ ಕಾಂಗ್ರೆಸ್ ಪಕ್ಷದ ನಾಯಕರಾಗಿ ಇಂದಿರಾ
ನವದೆಹಲಿ, ಮಾರ್ಚ್ 17– ಮಧ್ಯಂತರ ಚುನಾವಣೆಗಳಲ್ಲಿ ಭಾರಿ ಜಯಗಳಿಸಿ ವಿಜಯೋತ್ಸಾಹದಿಂದಿರುವ ಆಡಳಿತ ಕಾಂಗ್ರೆಸ್ ಸಂಸತ್ ಪಕ್ಷವು ಭಾರಿ ಕೋಲಾ ಹಲ, ಪ್ರಶಂಸೆಗಳ ನಡುವೆ ಇಂದಿರಾ ಗಾಂಧಿ ಅವರನ್ನು ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆರಿಸಿತು.
ಐದನೆಯ ಲೋಕಸಭೆಗೆ 5 ವರ್ಷಗಳ ಅವಧಿಗೆ ಪಕ್ಷದ ನಾಯಕಿಯಾಗಿ ಆಯ್ಕೆ ಯಾದ ಬಗ್ಗೆ ಔಪಚಾರಿಕ ಪ್ರಕಟಣೆ, ಜಯ ಘೋಷಗಳ ನಂತರ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಇಂದಿರಾ ಅವರು, ‘ಇದು ವಿಜಯೋತ್ಸವಕ್ಕೆ ಸಮಯವಲ್ಲ; ಸಮಾಜವಾದದ ಹಾದಿಯಲ್ಲಿ ರಾಷ್ಟ್ರ ಮತ್ತು ಜನತೆಯನ್ನು ಮುನ್ನಡೆಸುವ ಬೃಹತ್ ಕಾರ್ಯ ನಮ್ಮ ಮುಂದಿದೆ’ ಎಂದು ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.