ನವದೆಹಲಿ, ಏ. 3– ಮೇ ತಿಂಗಳಿಂದ ಸೆಪ್ಟೆಂಬರ್ವರೆಗಿನ ಕೊರತೆ ಅವಧಿಯಲ್ಲಿ ಜನತಾ ಚಳವಳಿ ಉಗ್ರ ಸ್ವರೂಪ ತಾಳಿ ಅಪಾಯದ ಮಟ್ಟಕ್ಕೆ ಹೋಗಬಹುದೆಂದೂ ಇದಕ್ಕಾಗಿ ಸಕಾಲಿಕ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಕೇಂದ್ರ ಗೃಹ ಖಾತೆಯು ಆಹಾರ ಕೊರತೆ ಇರುವ ಎಲ್ಲ ರಾಜ್ಯ ಸರ್ಕಾರಗಳಿಗೆ ಎಚ್ಚರಿಸಿದೆ.
ಈ ಬಗ್ಗೆ ಕೇಂದ್ರವು ಸುತ್ತೋಲೆಯೊಂದನ್ನು ಕಳುಹಿಸಿದೆ. ಗುಜರಾತ್ ಮತ್ತು ಬಿಹಾರದಲ್ಲಿನ ಘಟನೆಗಳು ಇತರ ಕೊರತೆ ರಾಜ್ಯಗಳಿಗೆ ಮುನ್ನೆಚ್ಚರಿಕೆಯಾಗಿವೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲೂ ಇಂತಹ ಚಳವಳಿಗಳು ಆರಂಭವಾಗಬಹುದು.
ಪಶ್ಚಿಮ ಬಂಗಾಳದಲ್ಲಿ ಈ ಬೆದರಿಕೆ ಬಹಳ ಹೆಚ್ಚಾಗಿದೆ. ಇಲ್ಲಿ ಆಸ್ಫೋಟಕ ಪರಿಸ್ಥಿತಿಯನ್ನು ತಪ್ಪಿಸಲು ತ್ವರಿತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ರಾಯ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮೊಹಿತಾ ಚರ್ಚಿಸಿದರು.
ಬೆಂಗಳೂರು, ಏ. 3– ರಾಜ್ಯದಲ್ಲಿ ಹಂತ ಹಂತವಾಗಿ ಪಾನನಿರೋಧವನ್ನು ಜಾರಿಗೆ ತರಲು ಸರ್ಕಾರ ಯೋಚಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು ಇಂದು ವಿಧಾನಪರಿಷತ್ತಿನಲ್ಲಿ ಲಿಖಿತ ಉತ್ತರ ನೀಡಿದರು.
ಶ್ರೀ ಎಂ.ವಿ.ವೆಂಕಟಪ್ಪ ಅವರ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಅವರ ಗೈರುಹಾಜರಿಯಲ್ಲಿ ಕಂದಾಯ ಸಚಿವ ಶ್ರೀ ಎನ್.ಹುಚ್ಚಮಾಸ್ತಿಗೌಡ ಅವರು ಉತ್ತರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.