ನವದೆಹಲಿ, ಫೆ. 17– ಹಣದುಬ್ಬರದ ವಿರುದ್ಧ ಸರ್ಕಾರ ಕೈಗೊಂಡಿರುವ ಸಂಘಟಿತ ಕ್ರಮಗಳಿಂದ ಬೆಲೆಗಳು ಇಳಿಯಲಾರಂಭಿಸಿವೆ ಎಂದು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಇಂದು ತಿಳಿಸಿದರು.
ಅಗತ್ಯ ವಸ್ತುಗಳು ಸಲೀಸಾಗಿ ಸಿಗುವ ಪರಿಸ್ಥಿತಿ ಸಹ ಉತ್ತಮಗೊಂಡಿದೆಯೆಂದೂ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ಘಾಟಿಸುತ್ತಾ ಹೇಳಿದರು.
ಹಿಂಗಾರು ಬೆಳೆ ಉತ್ತಮವಾಗಿದೆ. ವಿದ್ಯುತ್ ಉತ್ಪಾದನೆ ಕಳೆದ ವರ್ಷಕ್ಕಿಂತ ಶೇ 14ರಷ್ಟು ಹೆಚ್ಚಿದೆ. ಆದರೂ ಇನ್ನೂ ಕೆಲವು ರಾಜ್ಯಗಳು ವಿದ್ಯುತ್ ಅಭಾವದಿಂದ ನರಳುತ್ತಿರುವ ಕಾರಣ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಪೂರೈಸಲು ಆದ್ಯತೆ ನೀಡಲಾಗಿದೆ ಎಂದೂ ರಾಷ್ಟ್ರಪತಿಗಳು ಹೇಳಿದರು.
ಬೆಂಗಳೂರು, ಫೆ. 17– ‘ಸರ್ಕಾರದ ಬೆಂಬಲಿಗರಿಗೆ ಹಣದ ಚೀಲ– ವಿರೋಧಿಸಿದವರಿಗೆ ಕಬ್ಬಿಣದ ಸಲಾಕಿ, ಸೈಕಲ್ ಚೈನಿನ ಹೊಡೆತ’ ಎಂದು ನುಡಿದ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಅವರು ವಿದ್ಯಾರ್ಥಿಗಳ ಮೇಲೆ ನಾನಾ ಕಡೆ ಹಲ್ಲೆ ನಡೆದಿದೆಯೆಂದು ಇಂದು ವಿಧಾನಸಭೆಯಲ್ಲಿ ಟೀಕಿಸಿದರು.
ಬೆಂಗಳೂರು, ಶಿವಮೊಗ್ಗ, ಭದ್ರಾವತಿ, ಮೈಸೂರು ಮೊದಲಾದ ಕಡೆ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ಅವರು ‘ಎಷ್ಟು ಮಂದಿಯನ್ನು ಬಂಧಿಸಿದ್ದೀರಿ? ಪೊಲೀಸರು ಏನು ಮಾಡುತ್ತಿದ್ದಾರೆ? ಎಷ್ಟು ದಿನ ಅಧಿಕಾರ ದುರುಪಯೋಗ ಮಾಡಿ ಆಡಳಿತ ನಡೆಸಬೇಕೆಂದಿದ್ದೀರಿ? ಎಂದು ಸರ್ಕಾರವನ್ನು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.