ಪ್ರಧಾನಿ ಜೊತೆ ಪಾಕ್ ನಿಯೋಗದ ಚರ್ಚೆ: ಇಂದು 5ನೇ ಸುತ್ತಿನ ಮಾತುಕತೆ
ನವದೆಹಲಿ, ಆಗಸ್ಟ್ 29– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಜತೆ ಪಾಕಿಸ್ತಾನಿ ನಿಯೋಗವು ಇಪ್ಪತ್ತು ನಿಮಿಷಗಳು ಮಾತುಕತೆ ನಡೆಸಿದ ಬಳಿಕ ಉಭಯ ದೇಶಗಳ ನಿಯೋಗಗಳು ನಾಳೆ ಮತ್ತೆ ಸಭೆ ಸೇರುವುವು ಎಂದು ಇಲ್ಲಿ ಪ್ರಕಟಿಸಲಾಯಿತು.
ಪಾಕಿಸ್ತಾನದ ವಿದೇಶಾಂಗ ಖಾತೆಯ ಪ್ರಧಾನ ಕಾರ್ಯದರ್ಶಿ ಅಜೀಜ್ ಅಹಮದ್ ಹಾಗೂ ಪಾಕಿಸ್ತಾನ ನಿಯೋಗದ ಇನ್ನೊಬ್ಬ ಸದಸ್ಯ ರಫಿರಾಜಾ ಅವರು ಪ್ರಧಾನಿ ಅವರನ್ನು ಸಂಜೆ ಭೇಟಿಯಾಗಿದ್ದರು.
ಭಾರತದ ವಿದೇಶಾಂಗ ಮಂತ್ರಿ ಸರ್ದಾರ್ ಸ್ವರಣ್ಸಿಂಗ್ ಹಾಗೂ ಪ್ರಧಾನಿ ಅವರ ಆಪ್ತ ಕಾರ್ಯದರ್ಶಿ ಶ್ರೀ ಪಿ.ಎನ್.ಹಕ್ಸಾರ್ ಅವರು ಈ ಮಾತುಕತೆಯಲ್ಲಿ ಹಾಜರಿದ್ದರು.
ಪ್ರತೀ ಜಿಲ್ಲೆಯಲ್ಲೂ ಸಚಿವರೊಬ್ಬರ ನೇತೃತ್ವದಲ್ಲಿ ಅಭಾವ ಸ್ಥಿತಿ ಬಗ್ಗೆ ವಿಶೇಷ ಗಮನ
ಬೆಂಗಳೂರು, ಆಗಸ್ಟ್ 29– ಅಭಾವ ಪರಿಸ್ಥಿತಿ, ಜರೂರು ಕೃಷಿ ಕಾರ್ಯಕ್ರಮ ಹಾಗೂ ನಿವೇಶನಗಳ ಹಂಚಿಕೆಯ ಬಗ್ಗೆ ವಿಶೇಷ ಗಮನ ಕೊಡಲು ರಾಜ್ಯದ ನಾನಾ ಜಿಲ್ಲೆಗಳನ್ನು ಸಚಿವರು ಹಾಗೂ ರಾಜ್ಯ ಸಚಿವರುಗಳಿಗೆ ಹಂಚಲಾಗಿದೆ.
ಸಚಿವರು ಹಾಗೂ ರಾಜ್ಯ ಸಚಿವರು ತಮ್ಮ ಕೆಲಸದ ಜೊತೆಗೆ ಈ ಜಿಲ್ಲೆಗಳಲ್ಲಿ ಈ ಮೂರು ಯೋಜನೆಗಳ ಕಾರ್ಯಾಚರಣೆ ಬಗ್ಗೆ ಮೇಲ್ವಿಚಾರಣೆ ನಡೆಸುವರೆಂದು ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು ಇಂದು ವರದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.