ಮಕ್ಕಳ ಕಲ್ಯಾಣಕ್ಕಾಗಿ ಸಮಗ್ರ ರಾಷ್ಟ್ರೀಯ ನೀತಿಗೆ ನಿರ್ಧಾರ
ನವದೆಹಲಿ, ಮೇ 20– ಮಕ್ಕಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ನೀತಿ ಕುರಿತು ಸಮಗ್ರ ನಿರ್ಣಯವೊಂದನ್ನು ಸ್ವೀಕರಿಸಲು ಸರ್ಕಾರ ನಿರ್ಧರಿಸಿರುವುದೆಂದು ಕೇಂದ್ರದ ಶಿಕ್ಷಣ ಮತ್ತು ಸಮಾಜಕಲ್ಯಾಣ ಸಚಿವ ಸಿದ್ಧಾರ್ಥ ಶಂಕರರಾಯ್ ಅವರು ಇಂದು ಇಲ್ಲಿ ಪ್ರಕಟಿಸಿದರು.
ಜೈಪ್ರಕಾಶರ ಯುಎಆರ್ ಭೇಟಿ ಸಂಪೂರ್ಣ ವಿಫಲ
ಕೈರೋ, ಮೇ 20– ಅಧ್ಯಕ್ಷ ಅನ್ವರ್ ಸಾದತ್ ಅವರನ್ನು ಭೇಟಿ ಮಾಡಲು ಎರಡು ದಿನಗಳ ಕಾಲ ಕಾದು ವಿಫಲಗೊಂಡ ನಂತರ ಸರ್ವೋದಯ ನಾಯಕ ಶ್ರೀ ಜೈಪ್ರಕಾಶ ನಾರಾಯಣ್ ಅವರು ನಿನ್ನೆ ಇಲ್ಲಿಂದ ಇಟಲಿಗೆ ತೆರಳಿದರು.
ಪೂರ್ವ ಪಾಕಿಸ್ತಾನದಲ್ಲಿನ ವಿಷಮ ಪರಿಸ್ಥಿತಿಯನ್ನು ಸಾದತ್ರಿಗೆ ವಿವರಿಸಿ, ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಪ್ರಭಾವ ಬೀರಬೇಕೆಂದು ಅವರನ್ನು ಕೋರಲು ಶ್ರೀ ಜೈಪ್ರಕಾಶ್ ಇಚ್ಛಿಸಿದ್ದರು.
ಅವರು ತಮಗುಂಟಾದ ನಿರಾಶೆಯನ್ನು ವರದಿಗಾರರ ಜೊತೆ ಮಾತನಾಡುತ್ತಾ ಸ್ಪಷ್ಟಪಡಿಸಿದ್ದಾರೆ. ಪೂರ್ವ ಪಾಕಿಸ್ತಾನದಲ್ಲಿನ ವಿಷಮ ಪರಿಸ್ಥಿತಿ ಹಾಗೂ ಅಲ್ಲಿನ ಜನರ ವೇದನೆ ಬಗ್ಗೆ ಈಜಿಪ್ಟಿನ ವಲಯಗಳಲ್ಲಿ ಅರಿವುಂಟು ಮಾಡಲು ಶ್ರೀ ಜೈಪ್ರಕಾಶರಿಗೆ ಸಾಧ್ಯವಾಯಿತೇ ಎಂಬುದನ್ನು ಕಾದು ನೋಡಬೇಕಾಗಿದೆ. ಅವರು ಈಜಿಪ್ಟಿನ ಪತ್ರಿಕೋದ್ಯಮಿಗಳು ಮತ್ತು ಬುದ್ಧಿಜೀವಿಗಳ ಜೊತೆ ಮಾತನಾಡಿ ಪೂರ್ವ ಪಾಕಿಸ್ತಾನದ ಬಿಕ್ಕಟ್ಟನ್ನು ವಿವರಿಸಿದರು. ಆದರೆ, ಪೂರ್ವ ಪಾಕಿಸ್ತಾನದ ಪರಿಸ್ಥಿತಿಯನ್ನು ಜನತೆಗೆ ತಿಳಿಸಲು ಈಜಿಪ್ಟಿನ ವರದಿಗಾರರು ಇಚ್ಛಿಸಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.