ಹಿಂಸಾಕೃತ್ಯಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ
ಬೆಂಗಳೂರು, ಸೆ. 24– ಎಕ್ಸ್ಪೋ– 70 ನಿಯೋಗದ ಆಯ್ಕೆ ಹಾಗೂ ಪೊಲೀಸರ ಅತಿರೇಕವನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಇಂದು ಹಿಂಸೆಗೆ ತಿರುಗಿತು. ಸೆಂಟ್ರಲ್ ಕಾಲೇಜು ಹಾಗೂ ಸೆನೆಟ್ ಹಾಲ್ ಮೇಲೆ ದಾಳಿ, ಭೂಗರ್ಭಶಾಸ್ತ್ರದ ಇಲಾಖೆ ಕಚೇರಿಯ ಸಂಪೂರ್ಣ ಧ್ವಂಸ, ಪೀಠೋಪಕರಣಗಳ ದಹನದೊಡನೆ ನಗರದಲ್ಲಿ ವಿದ್ಯಾರ್ಥಿಗಳಿಂದ ಹಿಂಸಾಕೃತ್ಯಗಳು ನಡೆದವು.
ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಕೆಲವು ಬಾರಿ ಲಾಠಿ ಹಾಗೂ ಎರಡು ಬಾರಿ ಅಶ್ರುವಾಯು ಪ್ರಯೋಗವನ್ನು ಮಾಡಿದರು.
ಈ ಘಟನೆಗಳಿಂದ ಅನೇಕ ಪೊಲೀಸರು, ವಿದ್ಯಾರ್ಥಿಗಳು ಬಸ್ ಪ್ರಯಾಣಿಕರಿಗೆ ಗಾಯಗಳಾಗಿವೆ. ಇಂದಿನ ಹಿಂಸಾಕೃತ್ಯಗಳ ಕಾರಣ, ನಗರದ ಕಾಲೇಜುಗಳನ್ನು ಅಕ್ಟೋಬರ್ 15ರವರೆಗೆ ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿದೆ.
ಜಂಬೂ ಸವಾರಿಗೆ ಬದಲು ಬೇರೆ ವ್ಯವಸ್ಥೆ ಈ ವರ್ಷ ಇಲ್ಲ
ಮೈಸೂರು, ಸೆ. 24– ಕಾಲಾವಕಾಶವಿಲ್ಲದ ಕಾರಣ ಜಂಬೂ ಸವಾರಿಗೆ ಬದಲು ಬೇರೆ ರೀತಿಯ ಮೆರವಣಿಗೆಯನ್ನಾಗಲಿ, ಪಂಜು ಪ್ರದರ್ಶನವನ್ನಾಗಲಿ ಈ ವರ್ಷ ನಡೆಸಲು ಸಾಧ್ಯವಾಗುವುದಿಲ್ಲವೆಂದು ಇಂದು ಇಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಿರ್ಧರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.