ಭಾರತದ ನ್ಯಾಟ್ಗಳಿಗೆ ಮೂರು ಪಾಕ್ ಸೇಬರ್ಜೆಟ್ಗಳು ಬಲಿ
ನವದೆಹಲಿ, ನ. 23– ಕಲ್ಕತ್ತದ ಈಶಾನ್ಯದಲ್ಲಿ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಬ್ರೋಯ್ರಾ ಸಮೀಪ ನಿನ್ನೆ ಭಾರತದ ವಾಯುಪ್ರದೇಶ ಉಲ್ಲಂಘಿಸಿ ಬಂದ ಪಾಕಿಸ್ತಾನದ ನಾಲ್ಕು ಸೇಬರ್ ಒಟ್ ವಿಮಾನಗಳಲ್ಲಿ ಮೂರನ್ನು ಭಾರತೀಯ ವಿಮಾನಪಡೆಯ ನಾಲ್ಕು ನ್ಯಾಟ್ ವಿಮಾನಗಳು ಹೊಡೆದು ಉರುಳಿಸಿದವು.
ಪಾಕಿಸ್ತಾನಿ ವಿಮಾನ ಚಾಲಕರು ಪ್ಯಾರಾಷೂಟ್ ಮೂಲಕ ಕೆಳಕ್ಕೆ ಇಳಿದರು. ಅವರಲ್ಲಿ ಫ್ಲೈಟ್ ಲೆಫ್ಟಿನೆಂಟ್ ಪಾವೇಜ್ ಮೆಹದಿ ಮತ್ತು ಫ್ಲೈಯಿಂಗ್ ಆಫೀಸರ್ ಆಫೀಸರ್ ಖಲೀಲ್ಅಹಮದ್ ಎಂಬ ಇಬ್ಬರು ’ ನಮ್ಮ ಬಂಧನದಲ್ಲಿದ್ದಾರೆ‘. ಇನ್ನೊಬ್ಬ ಚಾಲಕನೂ ಬಂಧಿಸಲ್ಪಟ್ಟಿರುವುದಾಗಿ ಅಧಿಕೃತವಲಯಗಳಿಂದ ನಂತರ ಗೊತ್ತಾಗಿದೆ. ಆದರೆ ಅವನ ಹೆಸರು ಗೊತ್ತಾಗಲಿಲ್ಲ.
ಜನತಾ ಚೀನದ ಜತೆ ಉತ್ತಮ ಬಾಂಧವ್ಯಕ್ಕೆ ಸರ್ವ ಯತ್ನ
ನವದೆಹಲಿ, ನ. 23– ಭಾರತದ ವಿರುದ್ಧ ಆಪಾದನೆ ಮಾಡಿ ಚೀನಾ, ವಿಶ್ವಸಂಸ್ಥೆಯ ಮೂರನೆಯ ಸಮಿತಿಯಲ್ಲಿ ಹೇಳಿಕೆ ನೀಡಿದ್ದರೂ ಭಾರತವು ಅದರೊಂದಿಗೆ ತನ್ನ ಬಾಂಧವ್ಯವನ್ನು ಉತ್ತಮ ಪಡಿಸಿಕೊಳ್ಳುವ ಯತ್ನದಲ್ಲಿ ಮುಂದುವರಿಯುತ್ತದೆ ಎಂದು ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಬಂಗ್ಲಾದೇಶದ ಪ್ರಶ್ನೆ ಬಗ್ಗೆ ಸಮಿತಿಯಲ್ಲಿ ಚೀನೀ ಪ್ರತಿನಿಧಿ ಪಾಕ್ ಪರ ಧೋರಣೆಯನ್ನುವಹಿಸಿದ್ದರೆಂಬ ವರದಿ ಬಗ್ಗೆ ಇಂದು ರಾಜ್ಯ ಸಭೆಯಲ್ಲಿ ಗಮನ ಸೆಳೆವ ಸೂಚನೆಗೆ ಉತ್ತರ ನೀಡುತ್ತಿದ್ದ ಸಚಿವರು ’ನಮ್ಮ ಮುಖ್ಯ ನಿಲುವನ್ನು ಬಿಟ್ಟು ಕೊಡದೇ ಬೇರೆ ರಾಷ್ಟ್ರದ ಜತೆ ಬಾಂಧವ್ಯ ಉತ್ತಮ ಪಡಿಸುವುದು ಸಾಧ್ಯವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.