ಪಳನಿಯ ಚಿಲ್ಲರೆ ನಗರ ಪೊಲೀಸರ ವಶ
ಬೆಂಗಳೂರು, ಮೇ 30– ನಗರದ ಪೊಲೀಸರು ಇಂದು ಬೆಳಿಗ್ಗೆ ಚಾಮರಾಜ ಪೇಟೆಯ ನಾಲ್ಕು ಮಾರುವಾಡಿ ಅಂಗಡಿ ಗಳನ್ನು ಶೋಧಿಸಿ ಸುಮಾರು ಹತ್ತು ಸಹಸ್ರ ರೂಪಾಯಿಯ ಚಿಲ್ಲರೆ ನಾಣ್ಯಗಳನ್ನು ವಶಪಡಿಸಿಕೊಂಡರು.
ಈ ಸಂಬಂಧದಲ್ಲಿ ಮದುರೆ ಜಿಲ್ಲೆಯ ಪಳನಿ ನಿವಾಸಿ ಕುಪ್ಪುಸ್ವಾಮಿ ಮತ್ತು ಅವರ ಸೇವಕನನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹನ್ನೊಂದು ಚೀಲಗಳಲ್ಲಿ ತುಂಬಿಡಲಾಗಿದ್ದ ಒಂದು, ಮೂರು ಹಾಗೂ ಐದು ಪೈಸೆ ನಾಣ್ಯಗಳ ಅಂದಾಜು ತೂಕ 470 ಕೆ.ಜಿ.
ನಗರದಲ್ಲಿ ಕಳೆದ ಕೆಲವು ತಿಂಗಳಿಂದ ಚಿಲ್ಲರೆ ನಾಣ್ಯಗಳ ಅಭಾವ ಉಂಟಾಗಿದ್ದು, ಸಾರ್ವಜನಿಕರು, ವರ್ತಕರು ರಾಜ್ಯಪಾಲರಿಗೆ ಅನೇಕ ಬಾರಿ ದೂರು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.
ದಕ್ಷಿಣದ ಚಿತ್ರೋದ್ಯಮ ಭಾರಿ ಬಿಕ್ಕಟ್ಟಿನಲ್ಲಿ
ಮದರಾಸು, ಮೇ 30– ಮದರಾಸಿನ ಚಲನಚಿತ್ರೋದ್ಯಮ ಈ ವರ್ಷದ ಆರಂಭದಿಂದಲೂ ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದ ತೀರಾ ಇಳಿಮುಖವಾಗಿ ಬಿಕ್ಕಟ್ಟನ್ನೆದುರಿಸುತ್ತಿದೆ.
ಕಳೆದ ಆರು ತಿಂಗಳಲ್ಲಿ ತಯಾರಿಸಿದ ಚಿತ್ರಗಳಲ್ಲಿ ಶೇ 95ರಷ್ಟು ಗಲ್ಲಾ ಪೆಟ್ಟಿಗೆಯ ದೃಷ್ಟಿಯಿಂದ ಭಾರಿ ಪೆಟ್ಟು ತಿಂದಿದೆ.
ಪರಿಸ್ಥಿತಿ ಹೀಗಿರುವಾಗ, ತಯಾರಿಕೆಯ ವಿವಿಧ ಘಟ್ಟಗಳಲ್ಲಿದ್ದು ಮೂರು ಕೋಟಿ ರೂ.ಗಳ ಬಂಡವಾಳ ಹೊಂದಿರುವ ಎಪ್ಪತ್ತೈದು ಚಿತ್ರಗಳು ಹೊರಬರುವುದು ಸಂದೇಹ ಎಂದು ದಕ್ಷಿಣ ಭಾರತ ಫಿಲ್ಮ್ ಚೇಂಬರಿನ ಅಧ್ಯಕ್ಷ ಎ.ಎಲ್.ಶ್ರೀನಿವಾಸನ್ ಇಂದು ಇಲ್ಲಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.