
ಚುರುಮುರಿ: ಪಾಸಿಂಗ್ ಮಾರ್ಕ್ಸ್
ಬೇತಾಳ ವಿಕ್ರಮಾದಿತ್ಯನ ಮಗ್ಗುಲಿಗೆ ಬಂದು ಕೂತ್ಗಂದು, ‘ರಾಜನೇ ಅಡ್ಡಬಿದ್ದೆ. ಮೊನ್ನೆ ನಾನು ದುರ್ಗದಗೆ ಜಮೀರಣ್ಣನ್ನ ಮಗ್ಗುಲಗಿದ್ದೋನ ಹೆಗಲೇರಿಕ್ಯಂದಿದ್ದೆನಲ್ಲಾ ಅವನು ಜನ ನೋಡಿ ಖುಸಿಯಾಗಿ ‘ಡಿಸಿಎಂ ಜಮೀರಣ್ಣನಿಗೆ ಜೈ’ ಅಂದುದ್ಕೆ ಜಮೀರಣ್ಣ ಹಿಡಕಂದು ಮುತ್ಕೊಟ್ಬುಡದಾ? ಆವಯ್ಯಗೆ ಹಾರ್ಟಿಗೂ ನಾಲಗೇಗೂ ಪಿಲ್ಟರ್ ಇಲ್ಲ ಕನ್ರೀ. ಒಳ್ಳೇನು’ ಬೇತಾಳ ಹೊಗಳಿತು.
‘ರಾಜನ್ ಈವತ್ತು ನಾವು ಬ್ಯಾರೇ ಆಟ ಆಡಮು. ನಾನು ಪ್ರಶ್ನೆ ಕೇಳ್ತೀನಿ ನೀನು ಉತ್ತರ ಹೇಳು. ಉತ್ತರ ಕೊಡದೇ ಇದ್ರೆ ನಾನು ಸೋತಂಗೆ’ ಬೇತಾಳ ಪಂದ್ಯ ಕಟ್ಟಿತು.
‘ರಾಜಕಾರಣಿಗಳು ದೊಣ್ಣೆ, ಕತ್ತಿ, ಪಥ ಸಂಚಲನ, ಸಂಘಟನೆ ಅಂತ ಜಗಳಾಡ್ತಾ ಟೈಮು ವೇಸ್ಟ್ ಮಾಡ್ತಾವ್ರಲ್ಲ ಯಾಕೆ?’ ಬೇತಾಳ ಕೇಳಿತು.
‘ಮಾಡಕ್ಕೆ ಕ್ಯಾಮೆ ಇಲ್ದಿದ್ದಾಗ ಹಂಗೀಯೆ’ ವಿಕ್ರಮಾದಿತ್ಯ ಉತ್ತರ ಕೊಟ್ಟ.
‘ಸಿಂದಗಿಯಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಿಸ್ಯವರಂತೆ. ಯಾಕೆ?’ ಬೇತಾಳ ಬೇಜಾರಾತು.
‘ರಾಜಕೀಯದೇಲಿ ದೇಸವೇ ಉಲ್ಟಾ ಆಗ್ಯದೆ ಅಂತ ತೋರಿಸಕ್ಕೆ’ ವಿಕ್ರಮಾದಿತ್ಯ ಉತ್ತರಿಸಿದ.
‘ಕರೆಟ್ಟು. ನಾಯಕತ್ವ ಬದಲಾವಣೆ ಯಾವಾಗ?’
‘ಯಾರು ಹೇಳಿದ್ದು? ನಿನಗೆಂಗೆ ಗೊತ್ತಾತು? ನಾನು ಹೇಳಿದ್ದೀನೇನ್ರಿ? ಹಣೇಲಿ ಬರೆದಿರಬೇಕಲ್ಲವಾ?’ ವಿಕ್ರಮಾದಿತ್ಯ ಉತ್ತರಿಸಿದ.
‘ಒಪ್ಪಿದೆ ಕನ್ರಿ. ಕಾಂಗ್ರೆಸ್ಸಿಗೆ ಯಾವುದು ಅನಿವಾರ್ಯ?’
‘ಕಡಲೇಬೀಜ’ ಅಂತ ವಿಕ್ರಮಾದಿತ್ಯ ನಕ್ಕ.
‘ಸಿವಿಕ್ ಸಂಘಟನೆ ನಡೆಸಿದ ‘ನಮ್ಮ ಸರ್ಕಾರ, ನಮ್ಮ ರಿಪೋರ್ಟ್’ ಪರೀಕ್ಷೇಲಿ ಆಡಳಿತ ಪಕ್ಷ ನೂರಾ ಮೂವತ್ತನಾಲ್ಕು ಭರವಸೆಗಳಲ್ಲಿ ಒಂಬತ್ತು ಮಾತ್ರ ಈಡೇರಿಸಿ ಪೇಲಾಗ್ಯದಂತೆ. ಅದೆಂಗೆ?’
‘ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಮಂತ್ರಿಗಳೇ ಮೂವತ್ತಮೂರು ಮಾರ್ಕ್ಸು ತಗಂಡೋರೆಲ್ಲಾ ಪಾಸು ಅಂತ ಆಡ್ರು ಹೊಂಡ್ಸವ್ರೆ. ಇದುನ್ನ ಸಿವಿಕ್ ಸಂಘಟನೆಯೋರು ತಿಳಕಂದುಲ್ಲ’ ಅಂದ ವಿಕ್ರಮಾದಿತ್ಯ.
ಬೇತಾಳ ಸದ್ದಿಲ್ಲದಂಗೆ ಎದ್ದು ಬಂದು ವಿಕ್ರಮಾದಿತ್ಯನ ಹೆಗಲೇರಿ ಕೂಕಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.