
ಜಕಾರ್ತಾ, ಜ. 12– ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಕ್ಕಾಗಿ ಭಾರತದ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಿ ಸೇನಾ ಆಡಳಿತಗಾರ ಜನರಲ್ ಪರ್ವೇಜ್ ಮುಷರಫ್ ಅವರನ್ನು ನವದೆಹಲಿಗೆ ಭೇಟಿ ನೀಡಲು ಭಾರತ ಆಮಂತ್ರಣ ನೀಡಿಲ್ಲ.
ಜನರಲ್ ಮುಷರಫ್ ಅವರು ಭಾರತದ ಆಮಂತ್ರಣದ ಮೇಲೆ ದೆಹಲಿಗೆ ಹೋಗಲಿದ್ದಾರೆ ಎಂಬ ಪಾಕಿಸ್ತಾನದ ಕೆಲವು ಪತ್ರಿಕೆಗಳ ವರದಿ ಬಗ್ಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ‘ನಾನು ವರದಿಯನ್ನು ನೋಡಿದ್ದೇನೆ. ಆದರೆ, ಇಲ್ಲಿಯವರೆಗೆ ಯಾವುದೇ ದಿನಾಂಕ ನಿಗದಿಯಾಗಲ್ಲ’ ಎಂದು ತಿಳಿಸಿದರು.
ಬೆಂಗಳೂರು, ಜ. 12– ವಿದ್ಯುತ್ ಕಳವು ನಿಯಂತ್ರಣಕ್ಕೆ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಜಾರಿಗೊಳಿಸಿರುವ ಕಾನೂನಿನ ರೀತಿಯಲ್ಲಿ ರಾಜ್ಯದಲ್ಲೂ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಅಧ್ಯಕ್ಷ ವಿ.ಪಿ. ಬಳಿಗಾರ ಇಂದು ಇಲ್ಲಿ ತಿಳಿಸಿದರು.
ಕೆಪಿಟಿಸಿಎಲ್ ಏರ್ಪಡಿಸಿದ್ದ ನಿಗಮದ ನಿವೃತ್ತಿ ಪಿಂಚಣಿ ಮತ್ತು ಉಪದಾನ (ಗ್ರಾಚ್ಯುಟಿ) ಟ್ರಸ್ಟಿನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ವಿದ್ಯುತ್ ಕಳವು ಶೇ 10ರಷ್ಟು ಇದ್ದು, ಇದನ್ನು ನಿಯಂತ್ರಿಸಲು ಅನಿವಾರ್ಯವಾಗಿ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.