‘...ದಂಡ ಕಟ್ಟಲು ಸಿದ್ಧ. ಆದರೆ, ದೇವರನ್ನು ಮುಟ್ಟಲು ದಲಿತರಿಗೆ ಅವಕಾಶ ಕೊಡಬೇಕು’ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಧರ್ಮಸೇನ ಅವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಸೆ. 25). ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ಸಮುದಾಯದ ಬಾಲಕ, ದೇವರ ಗುಜ್ಜುಕೋಲು ಮುಟ್ಟಿದ ಕಾರಣಕ್ಕೆ ಹಲ್ಲೆಗೆ ಒಳಗಾಗಿದ್ದರಿಂದ ಈ ಮಾತು ಬಂದಿದೆ. ‘ದಂಡ’ ಪದದ ಅರ್ಥ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದು, ಜುಲ್ಮಾನೆ ಹಾಕುವುದು ಎಂದು. ‘ನಾವು ತಪ್ಪು ಮಾಡುತ್ತೇವೆ. ಆ ತಪ್ಪಿಗೆ ನೀವು ನಮಗೆ ಶಿಕ್ಷೆ ವಿಧಿಸಿ, ಜುಲ್ಮಾನೆ ಹಾಕಿ’ ಎಂದು ಹೇಳಿದಂತಾಯಿತು. ದಲಿತರು ಈ ರೀತಿಯ ಶರಣಾಗತಿ ಮನಃಸ್ಥಿತಿಯಿಂದ ಹೊರಬರಬೇಕಿದೆ.
‘ದೇವರನ್ನು ಮುಟ್ಟಲು ನಾವೂ ಅರ್ಹರಾಗಿದ್ದೇವೆ. ಅದನ್ನು ನಿರಾಕರಿಸುವ ಹಕ್ಕು ನಿಮಗಿಲ್ಲ. ಮುಟ್ಟಿದರೆ ದಂಡ ವಿಧಿಸುವ ಅಧಿಕಾರವೂ ನಿಮಗಿಲ್ಲ’ ಎಂದು ಹೇಳಿ, ದಂಡ ವಿಧಿಸಿದವರ ಅಧಿಕಾರ ವ್ಯಾಪ್ತಿಯ ಮಿತಿಯನ್ನು ಅವರಿಗೆ ನೆನಪಿಸಬೇಕಿದೆ. ದಲಿತರು ಸಮಾನತೆಗಾಗಿ, ಸಮಾನ ಹಕ್ಕುಗಳಿಗಾಗಿ ಆಗ್ರಹಿಸಬೇಕು ಮತ್ತು ಸಂಘಟಿತ ಹೋರಾಟ ಮಾಡಿ ಆ ಹಕ್ಕುಗಳನ್ನು ಪಡೆಯುವ ದಿಸೆಯಲ್ಲಿ ಪ್ರಯತ್ನಿಸಬೇಕು.
⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.