ದಸರಾ ರದ್ದುಪಡಿಸಲು ಸಲಹೆ
ಮೈಸೂರು, ಸೆ. 30– ಮೈಸೂರಿನಲ್ಲೀಗ ಪ್ಲೇಗ್ ಭೀತಿಯ ನೆರಳು ದಟ್ಟವಾಗಿ ಹಬ್ಬಿದೆ. ಜನ ಭೀತಿಯಿಂದಾಗಿ ಬಗೆಬಗೆಯ ಗಾಳಿಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಯಾವುದೋ ಕಾರಣದಿಂದ ಇಲಿಯೊಂದು ಸತ್ತು ಬಿದ್ದಿದ್ದರೆ ಜನ ಭೀತಿಯಿಂದ ವೈದ್ಯರ ಬಳಿಗೆ ಓಡುವುದು, ವೈದ್ಯಾಧಿಕಾರಿಗಳಿಗೆ, ನಗರಪಾಲಿಕೆಗೆ ಫೋನ್ ಮಾಡುವುದು ಇತ್ಯಾದಿ ಸಂಗತಿಗಳು ಕಳೆದ ಎರಡು ದಿನಗಳಿಂದ ನಡೆಯುತ್ತಿವೆ.
ಈ ಭೀತಿ ಹಬ್ಬಲು ಮುಖ್ಯ ಕಾರಣ ಕೃಷ್ಣರಾಜ ಪೇಟೆ ತಾಲ್ಲೂಕಿನ ಬಳ್ಳೇಕೆರೆಯ ಯುವಕನೊಬ್ಬ ಮೈಸೂರಿಗೆ ಬಂದು ಸೋಂಕು ರೋಗ ಆಸ್ಪತ್ರೆಗೆ ಸೇರಿರುವುದು. ಈತ ಸೂರತ್ನಲ್ಲಿದ್ದು ಪ್ಲೇಗ್ ಕಾಣಿಸಿಕೊಂಡ ಕೂಡಲೇ ಅಲ್ಲಿಂದ ತನ್ನೂರಿಗೆ ಓಡಿಬಂದ. ಪ್ಲೇಗೇ ಇರಬೇಕೆಂಬ ಭೀತಿಯಿಂದ ಕೂಡಲೇ ಮೈಸೂರಿಗೆ ಚಿಕಿತ್ಸೆಗಾಗಿ ಕರೆದು ತರಲಾಯಿತು. ಈ ರೋಗಿ ಚಂದ್ರೇಗೌಡರ ರಕ್ತದ ಸ್ಯಾಂಪಲ್ಲನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಸೋಂಕು ರೋಗ ಆಸ್ಪತ್ರೆಯ ವೈದ್ಯ ಡಾ. ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪಾಸ್ವಾನ್ ರಾಜೀನಾಮೆ ಬಿಕ್ಕಟ್ಟಿನಲ್ಲಿ ದಳ
ನವದೆಹಲಿ, ಸೆ. 30 (ಪಿಟಿಐ)– ಜನತಾದಳದ ಹಿರಿಯ ಧುರೀಣ ರಾಮ್ ವಿಲಾಸ್ ಪಾಸ್ವಾನ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ದಳದಲ್ಲಿ ಹೊಸ ಬಿಕ್ಕಟ್ಟು ಉದ್ಭವಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದ ಅವರು, ನಾವು ಅಂಗೀಕರಿಸಿದ ಸಾಮಾಜಿಕ ನ್ಯಾಯ ಕುರಿತ ತತ್ವಗಳನ್ನು ಪಕ್ಷ ಅನುಸರಿಸದಿರುವುದೇ ರಾಜೀನಾಮೆಗೆ ಕಾರಣ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.