ಎನ್ಟಿಆರ್ ಉಚ್ಚಾಟನೆ, ನಾಯ್ಡು ಪಕ್ಷದ ಅಧ್ಯಕ್ಷ
ಹೈದರಾಬಾದ್, ಆ. 30 (ಪಿಟಿಐ)– ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರು ವಿಶ್ವಾಸಮತ ಕೇಳಲಿರುವ ಮುನ್ನಾದಿನವಾದ ಇಂದು ತೆಲುಗುದೇಶಂ ಪಕ್ಷದ ಸರ್ವಸದಸ್ಯರ ಸಭೆ ಜರುಗಿ, ಎನ್.ಟಿ.ರಾಮರಾವ್ ಅವರನ್ನು ಅಧ್ಯಕ್ಷಸ್ಥಾನದಿಂದ ಕಿತ್ತುಹಾಕಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿತು.
ಈ ಮಧ್ಯೆ ನಾಯ್ಡು ಅವರನ್ನು ತೆಲುಗುದೇಶಂ ಶಾಸಕಪಕ್ಷದ ನಾಯಕನನ್ನಾಗಿ ಮಾನ್ಯ ಮಾಡಿದ ವಿಧಾನಸಭೆ ಸ್ಪೀಕರ್ ರಾಮಕೃಷ್ಣುಡು ಅವರ ನಿರ್ಧಾರವನ್ನು ಪ್ರಶ್ನಿಸಿ ರಾಮರಾವ್ ಬೆಂಬಲಿಗರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ದೇವೇಗೌಡ ಸಮರ್ಥನೆಗೆ ಪ್ರತಿಪಕ್ಷ ಪ್ರತಿಭಟನೆ, ಧರಣಿ
ಬೆಂಗಳೂರು, ಆ. 30– ಕಾವೇರಿ ನ್ಯಾಯಮಂಡಲಿಯ ಮುಂದೆ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರ ಸಲ್ಲಿಸಿದ್ದ ‘ಸಂಕಷ್ಟ ಸ್ಥಿತಿಯಲ್ಲಿ ನೀರು ಹಂಚಿಕೆ ಸೂತ್ರದ ಅನ್ವಯ ತಮಿಳುನಾಡಿಗೆ ಐದು ಟಿಎಂಸಿ ನೀರು ಬಿಡುವುದು ಅನಿವಾರ್ಯವಾಗಿತ್ತು’ ಎಂದು ಮುಖ್ಯಮಂತ್ರಿ ದೇವೇಗೌಡರು ನೀಡಿದ ಉತ್ತರವನ್ನು ಪ್ರತಿಭಟಿಸಿ ವಿರೋಧಿ ಸದಸ್ಯರು ವಿಧಾನಸಭೆಯಲ್ಲಿ ಇಂದು ರಾತ್ರಿ ಧರಣಿ ನಡೆಸಿದರು.
ಗಣೇಶೋತ್ಸವ ಪ್ರಯುಕ್ತ ನಾಲ್ಕು ದಿನ ರಜೆ ಇದ್ದುದರಿಂದ ನಾನು ಈ ವಿಷಯವನ್ನು ಕೂಡಲೇ ಸದನದ ಗಮನಕ್ಕೆ ತರಲಾಗಲಿಲ್ಲ. ಆದರೂ ಕೂಡಲೇ ಮಂಡ್ಯ ಜಿಲ್ಲೆಯ ಶಾಸಕರನ್ನು ಸಂಪರ್ಕಿಸಿ ಯಾವ ಸಂದರ್ಭದಲ್ಲಿ ನೀರು ಬಿಡಲು ನಿರ್ಧಾರ ಕೈಗೊಳ್ಳಲಾಯಿತು ಎಂಬುದನ್ನು ವಿವರಿಸಿದೆ. ಆದರೆ ಕೆಲವು ವ್ಯಕ್ತಿಗಳು ರಾಜಕೀಯ ದುರುದ್ದೇಶದಿಂದ ಈ ವಿಷಯದಲ್ಲಿ ಜನರನ್ನು ತಪ್ಪು ದಾರಿಗೆ ಎಳೆದಿದ್ದರಿಂದ ಮಂಡ್ಯ ಜಿಲ್ಲೆಯ ಜನರ ಚಳವಳಿಯ ದಾರಿ ಹಿಡಿದಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.