
ಆಲೂಗೆಡ್ಡೆ ಖರೀದಿ ಮತ್ತೆ ಆರಂಭ: ರೈತರಿಗೆ ನೆಮ್ಮದಿ
ಹುಬ್ಬಳ್ಳಿ, ಡಿ. 28– ಹುಬ್ಬಳ್ಳಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಹತಾಶನಾದ ರೈತನೊಬ್ಬ ಆಲೂಗೆಡ್ಡೆ ಖರೀದಿ ಕೇಂದ್ರದ ನೌಕರರೊಬ್ಬರ ಮೇಲೆ ಹಲ್ಲೆ ನಡೆಸಿದ ನಂತರ ಎರಡು ದಿನ ಸ್ಥಗಿತಗೊಂಡಿದ್ದ ಆಲೂಗೆಡ್ಡೆ ಖರೀದಿ ಇಂದು ಮುಂಜಾನೆಯಿಂದ ಮತ್ತೆ ಆರಂಭವಾಯಿತು.
ಖರೀದಿ ನಿಂತೇ ಹೋಗುತ್ತದೆ ಎಂದು ಭಾವಿಸಿ ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದ ಬೆಳೆಗಾರರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಚುರುಕಿನ ಖರೀದಿ ಚಟುವಟಿಕೆಗಳು ಇಂದು ಮುಂಜಾನೆ ಎರಡು ಮಾರುಕಟ್ಟೆಗಳಲ್ಲಿ ಆರಂಭವಾದವು.
ಅಸ್ಸಾಂ: ಮತ್ತೆ ಎಂಟು ಹಿಂದಿ ಭಾಷಿಗರ ಹತ್ಯೆ
ಗುವಾಹಟಿ, ಡಿ. 28 (ಪಿಟಿಐ)– ಅಸ್ಸಾಂನಲ್ಲಿರುವ ಹಿಂದಿ ಭಾಷಿಗ ಸಮುದಾಯದ ಮೇಲೆ ನಡೆದ ಇನ್ನೊಂದು ಆಕ್ರಮಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಎಂಟು ಮಂದಿಯನ್ನು ಕೊಂದಿದ್ದಾರೆ.
ಮೃತರಲ್ಲಿ ಒಬ್ಬ ಮಹಿಳೆ, ಮೂವರು ಮಕ್ಕಳೂ ಸೇರಿದ್ದಾರೆ. ಕರ್ಬಿ ಅಂಗ್ಲೊಂಗ್ ಜಿಲ್ಲೆಯ ರೊಂಗ್ನಗರ, ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳು, ಬಿಹಾರಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.