ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ: ಅಂಚೆ ದರ ತೀವ್ರ ಏರಿಕೆ
ನವದೆಹಲಿ, ಫೆ. 28– ಅಂಚೆ ಸಾಮಗ್ರಿಗಳು ಇನ್ನಷ್ಟು ತುಟ್ಟಿ, ಬೀಡಿ, ಸಿಗರೇಟಿನ ಮೇಲೆ ಹೆಚ್ಚು ತೆರಿಗೆ, ವರಮಾನ ತೆರಿಗೆದಾರರಿಗೆ ಕೊಂಚ ಪರಿಹಾರ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು– ಇವು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಮಂಡಿಸಿದ 1997–98ನೇ ಸಾಲಿನ, ಸರ್ವರನ್ನೂ ಸುಪ್ರೀತಗೊಳಿಸುವ ಬಜೆಟ್ನ ಮುಖ್ಯ ರೂಪುರೇಷೆಗಳು.
ಬಂಡವಾಳ ಪೇಟೆಗೆ ನವಚೈತನ್ಯ ನೀಡಲು ಪರಿಹಾರಗಳು, ಆಹಾರಧಾನ್ಯ ಹಾಗೂ ರಸಗೊಬ್ಬರ ಸಹಾಯಧನ ಏರಿಕೆ, ಎಕ್ಸೈಸ್ ತೆರಿಗೆ ಪ್ರಮಾಣ ಖೋತಾ, ಆಮದು ಸುಂಕ ಇಳಿತ, ರಕ್ಷಣಾ ಕಾರ್ಯಕ್ಕೆ ಹೆಚ್ಚು ಹಣ ನೀಡಿಕೆ– ಇವು ಮುಖ್ಯಾಂಶಗಳು.
ಮಹಾನಗರಗಳಲ್ಲಿ ನಾಲ್ಕು ಚಕ್ರಗಳ ವಾಹನ, ಆಸ್ತಿಪಾಸ್ತಿ, ಟೆಲಿಫೋನ್ಗಳನ್ನು ಹೊಂದಿರುವವರು ಅಥವಾ ವಿದೇಶ ಪ್ರವಾಸ ಮಾಡಿರುವವರಿಗೆ ವರಮಾನ ತೆರಿಗೆ ವಿವರ ನೀಡಿಕೆಯನ್ನು ಕಡ್ಡಾಯ ಮಾಡಿರುವ ಸಚಿವರು, ಕಪ್ಪುಹಣವನ್ನು ಅಧಿಕೃತ ವರಮಾನವಾಗಿ ಪರಿವರ್ತಿಸುವ ಯೋಜನೆಯೊಂದನ್ನು ಪ್ರಕಟಿಸಿದರು.
ಸಾಮಾನ್ಯ ಪೋಸ್ಟ್ಕಾರ್ಡ್ನ ಬೆಲೆಯನ್ನು 15ರಿಂದ 25 ಪೈಸೆಗೆ ಏರಿಸಲಾಗಿದೆ.
ಅಂಚೆ ಸಾಮಗ್ರಿಗಳ ಬೆಲೆಯೇರಿಕೆಯಿಂದ ಒಟ್ಟು ರೂ 367 ಕೋಟಿ ವರಮಾನ ಸಂಗ್ರಹಿಸುವ ಉದ್ದೇಶವಿದ್ದು, ಸೇವಾ ತೆರಿಗೆಯನ್ನು ಇನ್ನೂ ಹಲವಾರು ದಂಧೆಗಳಿಗೆ ವಿಸ್ತರಿಸುವ ಮೂಲಕ ರೂ 1,200 ಕೋಟಿ ಸಂಗ್ರಹಿಸಲು ಉದ್ದೇಶಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ಹಲವು ಪ್ರೋತ್ಸಾಹದಾಯಕ ಕ್ರಮಗಳನ್ನು ಪ್ರಕಟಿಸಿರುವುದರಿಂದ ವೈಯಕ್ತಿಕ ಕಂಪ್ಯೂಟರ್ಗಳು, ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳು ಕಡಿಮೆ ಬೆಲೆಗೆ ದೊರೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.