ಬೆಂಗಳೂರು, ಡಿ. 9– ರಾಜ್ಯದಲ್ಲಿ ಆಡಳಿತ ಸೂತ್ರ ವಹಿಸಿಕೊಳ್ಳಲು ನಾಗಾಲೋಟದಲ್ಲಿ ಸಾಗಿರುವ ಜನತಾ ದಳದ ವಿಜಯದ ಎದುರು ಕಾಂಗ್ರೆಸ್ ದೂಳೀಪಟವಾಗಿದೆ. ದಳಕ್ಕೆ ಬಹುಮತ ಖಾತ್ರಿಯಾಗಿದ್ದು ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಮೂಡಿ ಬಂದಿದೆ.
ನಗರ ಮುದ್ರಣ ಅಚ್ಚಿಗೆ ಹೋಗುವ ವೇಳೆ ಬೆಳಗಿನ ಜಾವ ಎರಡೂವರೆ ಗಂಟೆಯಲ್ಲಿ ಪ್ರಕಟಿತ 167 ಸ್ಥಾನಗಳಲ್ಲಿ ಜನತಾ ದಳ 91 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 33 ಸ್ಥಾನಗಳೊಡನೆ ಎರಡನೇ ಸ್ಥಾನದಲ್ಲಿದ್ದು ಕಾಂಗ್ರೆಸ್ 24 ಸ್ಥಾನ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಕೆಸಿಪಿಯ 7, ಎಂಇಎಸ್ನ ಮೂವರು ಅಭ್ಯರ್ಥಿಗಳು, ಸಿಪಿಎಂ, ಎಐಡಿಎಂಕೆ ಹಾಗೂ ವಾಟಾಳ್ ಪಕ್ಷದ ತಲಾ ಒಬ್ಬರು ಮತ್ತು ಒಬ್ಬರು ಪಕ್ಷೇತರರು ವಿಜಯ ಸಾಧಿಸಿದ್ದಾರೆ. ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಜನತಾ ದಳದ ಡಾ. ಮಹೇಶ್ ಚಂದ್ ಅವರಿಂದ ಪರಾಭವಗೊಂಡಿದ್ದಾರೆ. ಹಿರಿಯ ಸಚಿವ ಕೆ.ಎಚ್. ರಂಗನಾಥ್ ಅವರು ಹಿರಿಯೂರು ಕ್ಷೇತ್ರದಲ್ಲಿ ಸೋಲಪ್ಪಿದ್ದಾರೆ. ರೈತ ಸಂಘದ ನೇತಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರೂ ಸೋತಿದ್ದಾರೆ.
ಯಡಿಯೂರಪ್ಪ ಜಯಭೇರಿ
ಶಿಕಾರಿಪುರ, ಡಿ. 9– ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ನಗರದ ಮಹದೇವಪ್ಪ ಅವರಿಗಿಂತ 28 ಸಾವಿರ ಅಧಿಕ ಮತಗಳನ್ನು ಪಡೆದು ಸತತ ನಾಲ್ಕನೇ ಬಾರಿ ಆಯ್ಕೆ ಆಗಿದ್ದಾರೆ. ಯಡಿಯೂರಪ್ಪ ಅವರಿಗೆ 50,885, ಮಹದೇವಪ್ಪನವರಿಗೆ 22,200 ಮತಗಳು ಲಭಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.